ಬೆಳಗಾವಿ: ಮುಸ್ಲಿಂ ಬಾಂಧವರು ನಾವು ಉಪಚುನಾವಣೆಯಲ್ಲಿ ವೋಟ್ ಹಾಕುತ್ತಿಲ್ಲ ಊರು ಬಿಡುತ್ತೇವೆ ಎಂದು ತಿಳಿಸಿರುವುದಾಗಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಗೋಕಾಕ್ ತಾಲೂಕಿನ ಮಕ್ಕಳಗೇರಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಡಿಸೆಂಬರ್ 3 ಮತದಾನ ನಡೆಯುವ ದಿನ ಗೋಕಾಕ್ ನ ಮುಸ್ಲಿಂ ಬಾಂಧವರು ಅಜ್ಮೀರಿಗೆ ಧಾರ್ಮಿಕ ಪ್ರವಾಸ ಹೋಗುತ್ತಿದ್ದಾರೆ. ಹೀಗಾಗಿ ಆ ದಿನ ವೋಟು ಹಾಕುತ್ತಿಲ್ಲ ಎಂದು ತಿಳಿಸಿದರು.
ಬಿಜೆಪಿಗೆ ಮುಸ್ಲಿಂ ಬಾಂಧವರು ಬೆಂಬಲಿಸುತ್ತಿರುವುದು ಹೊಸ ಇತಿಹಾಸ. 28 ಜಮಾತ್ ಮುಸ್ಲಿಂ ಬಾಂಧವರು ಸಭೆ ಮಾಡಿದ್ದಾರೆ. ಆ ಸಭೆಯಲ್ಲಿ ಕೆಲ ಮುಸ್ಲಿಂ ಬಾಂಧವರು ನಮಗೆ ಬಿಜೆಪಿಗೆ ವೋಟ್ ಹಾಕಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಎಂದು ಹೇಳಿದರು.
ಅಥಣಿ, ಕಾಗವಾಡ ಸೇರಿದಂತೆ ಎಲ್ಲಾ ಕಡೆ ನಮಗೆ ಹಿಂದೂ ಮುಸ್ಲಿಂಮರು ಬೆಂಬಲ ನೀಡುತ್ತಿದ್ದಾರೆ. ಬಿಜೆಪಿಯವರನ್ನು ಕೋಮುವಾದಿಗಳು ಎಂದು ಕರೆಯುತ್ತಾರೆ. ಆದರೆ ಇಲ್ಲಿಂದ ಹೊಸ ಅಧ್ಯಾಯ ಆರಂಭಿಸಿ ವಿರೋಧಿಗಳಿಗೆ ತಿರುಗೇಟು ನೀಡೋಣ ಎಂದು ರಮೇಶ್ ಜಾರಕಿಹೊಳಿ ಜನರಲ್ಲಿ ಮನವಿ ಮಾಡಿಕೊಂಡರು.