ರಾಮನಗರ: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಪಕ್ಷೇತರ ಸದಸ್ಯರು ಬಿಡದಿಯ ಈಗಲ್ ಟನ್ ರೆಸಾರ್ಟ್ ನಿಂದ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸಲು ತೆರಳಲಿದ್ದಾರೆ.
ಬಿಜೆಪಿಯಿಂದ ಹೈಜಾಕ್ ಮಾಡುವ ಭೀತಿಯಿಂದ ಕಾಂಗ್ರೆಸ್ನ ಶಾಸಕರು ಐವರು ಬಿಬಿಎಂಪಿ ಪಕ್ಷೇತರ ಸದಸ್ಯರನ್ನ ಈಗಲ್ಟನ್ಗೆ ರೆಸಾರ್ಟ್ ಗೆ ಗುರುವಾರ ಕರೆತಂದಿದ್ದರು. ಐವರು ಪಕ್ಷೇತರ ಸದಸ್ಯರ ಹೊಣೆ ಹೊತ್ತಿರುವ ಶಾಸಕರಾದ ಮುನಿರತ್ನ, ಎಸ್.ಟಿ ಸೋಮಶೇಖರ್ ಹಾಗೂ ಭೈರತಿ ಬಸವರಾಜ್ ಕೂಡಾ ಈಗಲ್ ಟನ್ ರೆಸಾರ್ಟ್ ನಲ್ಲೇ ಉಳಿದಿದ್ದಾರೆ.
ಇದೇ ವೇಳೆ ಮಾತನಾಡಿದ ಶಾಸಕ ಭೈರತಿ ಬಸವರಾಜ್ ಪಕ್ಷೇತರ ಸದಸ್ಯರನ್ನು ಬಿಜೆಪಿ ಹಲವು ಆಮಿಷಗಳನ್ನು ಒಡ್ಡುವ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರನ್ನು ಈಗಲ್ ಟನ್ ರೆಸಾರ್ಟ್ ಗೆ ಕರೆ ತಂದಿದ್ದೇವೆ. ಇಲ್ಲಿಂದಲೇ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸುತ್ತೇವೆ. ಬಿಜೆಪಿ ಜೊತೆಗೆ ಹೋಗಿರುವ ಇನ್ನಿಬ್ಬರು ಪಕ್ಷೇತರ ಸದಸ್ಯರಾದ ಆನಂದ್ ಹಾಗೂ ರಮೇಶ್ರನ್ನ ಸಂಪರ್ಕಿಸಿ ಮಾತನಾಡಿದ್ದೇವೆ. ಅವರು ಕೂಡಾ ನಮ್ಮ ಜೊತೆ ಬರುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ನಾವು ಕೂಡಾ ಮನವಿ ಮಾಡಿಕೊಂಡಿರುವುದಾಗಿ ತಿಳಿಸಿದರು.
ಪಕ್ಷೇತರ ಬಿಬಿಎಂಪಿ ಸದಸ್ಯ ಲಕ್ಷ್ಮಿನಾರಾಯಣ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ರಚನೆಯಾದಂತೆ, ಬಿಬಿಎಂಪಿಯಲ್ಲೂ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತೆ. ರಮೇಶ್ ಹಾಗೂ ಆನಂದ್ ಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ, ಮೊನ್ನೆ ಜೊತೆಗಿದ್ದವರು ಇಂದು ಸಂಪರ್ಕಕ್ಕೆ ಸಿಕ್ಕಿಲ್ಲ. ನಮಗೆ ಸಹಕಾರ ನೀಡಿದಂತೆ ಅವರಿಗೂ ನೀಡಿದ್ದರು. ನಾವು ಮೂರು ವರ್ಷಗಳಿಂದ ಜೊತೆಯಲ್ಲಿದ್ದೇವೆ ಮುಂದೆಯೂ ಇರುತ್ತೇವೆ. ಕಾಂಗ್ರೆಸ್-ಜೆಡಿಎಸ್ ಪಕ್ಷೇತರ ಸದಸ್ಯರೆಲ್ಲಾ ಸೇರಿ ಬಿಬಿಎಂಪಿ ಅಧಿಕಾರ ಚುಕ್ಕಾಣಿ ಹಿಡಿಯುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv