ಹುಬ್ಬಳ್ಳಿ: ಶಾಲೆಗಳಿಗೆ ನೀಡುವ ಒಂದು ತಿಂಗಳ ದಸರಾ ರಜೆಯನ್ನು (Dasara) 15 ದಿನಕ್ಕೆ ಸೀಮಿತಗೊಳಿಸಿರುವ ಸರ್ಕಾರದ ನಡೆಗೆ ಮಾಜಿ ಸಭಾಪತಿ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ (Basavaraj Horatti) ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶಿಕ್ಷಣ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬಸವರಾಜ ಹೊರಟ್ಟಿ ಪತ್ರ ಬರೆದಿದ್ದಾರೆ. ದಸರಾಗೆ ಈ ಮುಂಚೆ ಒಂದು ತಿಂಗಳು ರಜೆ ಕೊಡಲಾಗುತ್ತಿತ್ತು. ಹಾಗೇ ಎರಡು ತಿಂಗಳ ಬೇಸಿಗೆ ರಜೆ ನೀಡಲಾಗುತ್ತಿತ್ತು. ಆದ್ರೆ ಈ ಬಾರಿ ಕೇವಲ 15 ದಿನ ರಜೆ ನೀಡಿರೋದು ಸರಿಯಲ್ಲ. ದಸರಾ ಮತ್ತು ದೀಪಾವಳಿ ಹಬ್ಬ ಎರಡೂ ಒಂದೇ ತಿಂಗಳಲ್ಲಿ ಬಂದಿವೆ. ಹೀಗಾಗಿ ಈ ಎರಡೂ ಹಬ್ಬ ಮುಗಿಯೋವರೆಗೆ ರಜೆ ಕೊಡಬೇಕಾಗಿತ್ತು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ದೊಡ್ಡವರಾದರು ಕಾನೂನಿನ ಮುಂದೆ ಎಲ್ಲರೂ ಒಂದೇ : ಆರಗ ಜ್ಞಾನೇಂದ್ರ
ಕೇವಲ 15 ದಿನಗಳ ರಜೆಯಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಮಕ್ಕಳಿಗೆ ಶಾಲೆಯ ಪಾಠಗಳ ಜೊತೆಗೆ ಮನೆಯಲ್ಲಿನ ವಾತಾವರಣವು ಅಷ್ಟೇ ಮುಖ್ಯ. ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಹೀಗಾಗಿ ಒಂದು ತಿಂಗಳಿಗೆ ರಜೆ ವಿಸ್ತರಣೆ ಮಾಡಬೇಕೆಂದು ಪತ್ರದ ಮೂಲಕ ತಾಕೀತು ಮಾಡಿದ್ದಾರೆ.
ಸರ್ಕಾರದ ನಡೆಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವೂ ಸಹ ವಿರೋಧ ವ್ಯಕ್ತಪಡಿಸಿದೆ. ರಜೆಯನ್ನು ವಿಸ್ತರಣೆ ಮಾಡಬೇಕು ಎಂದು ಸಂಘವು ಸರ್ಕಾರಕ್ಕೆ ಮನವಿ ಮಾಡಿದೆ. ಇದನ್ನೂ ಓದಿ: ಹರೀಶ್ ಪೂಂಜಾ ಕಾರನ್ನು ಅಡ್ಡಗಟ್ಟಿ ತಲವಾರು ಝಳಪಿಸಿ ದುಷ್ಕರ್ಮಿಯಿಂದ ಜೀವ ಬೆದರಿಕೆ