– ನ್ಯಾಯಾಧಿಕರಣಕ್ಕೆ ಹೋಗುವ ಅಗತ್ಯ ಇರಲಿಲ್ಲ
ಹುಬ್ಬಳ್ಳಿ: ಮಹದಾಯಿ (Mahadayi) ಯೋಜನೆ ಹಿನ್ನಡೆಗೆ ಕಾಂಗ್ರೆಸ್ ನೇರ ಕಾರಣ. ಈ ವಿಚಾರವಾಗಿ ನ್ಯಾಯಾಧಿಕರಣಕ್ಕೆ ಹೋಗುವ ಅವಶ್ಯಕತೆ ಇರಲಿಲ್ಲ, ಮನಮೋಹನ್ ಸಿಂಗ್ (Manmohan Singh) ಸರ್ಕಾರದ ಅವಧಿಯಲ್ಲಿ ಟ್ರಿಬ್ಯುನಲ್ಗೆ ಹೋಗಿದ್ದು ಕಾಂಗ್ರೆಸ್ ಸರ್ಕಾರ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನ್ಯಾಯಮಂಡಳಿಗೆ ಹೋದ ಪರಿಣಾಮ ಮಹಾದಾಯಿ ಯೋಜನೆ ಎಂಟು – ಹತ್ತು ವರ್ಷ ತಡವಾಯಿತು. ಮಹದಾಯಿ ವಿಚಾರದಲ್ಲಿ ದೊಡ್ಡ ಅಪರಾಧ ಮಾಡಿದ್ದು ಕಾಂಗ್ರೆಸ್. ನ್ಯಾಯಾಧಿಕರಣಕ್ಕೆ ತಾವೇ ಬರೆದುಕೊಟ್ಟಿದ್ದಾರೆ ಮಹದಾಯಿಯಿಂದ ಮತ್ತು ಮಲಪ್ರಭಾ ನಡುವೆ ಇಂಟರ್ ಲಿಂಕಿಂಗ್ ಕಾಲುವೆ ಮಾಡಿದ್ದೆವು. ನಾವು ಮಾಡಿದ್ದ ಇಂಟರ್ ಲಿಂಕಿಂಗ್ ಕಾಲುವೆಗೆ ಕಾಂಗ್ರೆಸ್ನವರು ಗೋಡೆ ಕಟ್ಟಿದರು. ಕಾಲುವೆಯಲ್ಲಿ ಗೋಡೆ ಕಟ್ಟಿದ ಅಪಖ್ಯಾತಿ ಕಾಂಗ್ರೆಸ್ದು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್ವಿ ಅಂಜಾರಿಯಾ ಪ್ರಮಾಣ ವಚನ
ಗೋವಾದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಇದಕ್ಕೆ ಸಂಪೂರ್ಣ ವಿರೋಧ ಮಾಡಿತ್ತು. ಅಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇ ಡಿಪಿಆರ್ಗೆ ಅನುಮತಿ ಪಡೆಯಲಾಗಿತ್ತು. ಐದು ವರ್ಷ ಅಧಿಕಾರದಲ್ಲಿದ್ದರೂ ಡಿಪಿಆರ್ಗೆ ಅನುಮತಿ ಪಡೆಯಲಾಗಿಲ್ಲ. ಡಿಪಿಆರ್ ಅನುಮತಿ ಸಿಕ್ಕಿದ್ದು, ಸದ್ಯ ಪರಿಸರ ಇಲಾಖೆಯಲ್ಲಿದೆ. ಪರಿಸರ ಇಲಾಖೆಯವರು ಕೆಲವು ಮಾಹಿತಿ ಕೇಳಿದ್ದು, ರಾಜ್ಯ ಸರ್ಕಾರ ಮಾಹಿತಿ ಕೊಡಲಿ. ನಾವು ಸಹ ಪರಿಸರ ಇಲಾಖೆ ಮೇಲೆ ಒತ್ತಡ ಹೇರುತ್ತೇವೆ ಎಂದಿದ್ದಾರೆ.
ಪರಿಸರ ಇಲಾಖೆ ಅನುಮತಿ ಪಡೆಯದೇ ಟೆಂಡರ್ ಪ್ರಕ್ರಿಯೆ ಮಾಡುವ ಕೆಲಸ ಮಾಡಿದ್ದಾರೆ. ಗೋವಾದವರು ಈಗ ಕೋರ್ಟ್ಗೆ ಹೋಗಿದ್ದಾರೆ. ರಾಜ್ಯ ಸರ್ಕಾರ ಕೋರ್ಟ್ನಲ್ಲಿ ಸಮರ್ಥವಾದ ಮಾಡುತ್ತಿಲ್ಲ. ಕೃಷ್ಣ ಯೋಜನೆ, ಮೇಕೆದಾಟು ಸೇರಿ ಎಲ್ಲಾ ನೀರಾವರಿ ಯೋಜನೆ ವಿಚಾರದಲ್ಲೂ ಸರ್ಕಾರದಿಂದ ನಿರ್ಲಕ್ಷ್ಯವಾಗುತ್ತಿದೆ. ಈ ಸರ್ಕಾರ ಬಂದ ಮೇಲೆ ನಯಾ ಪೈಸೆ ಹಣ ಬಿಡುಗಡೆ ಮಾಡಿಲ್ಲ. ಗೋಡೆ ಕಟ್ಟಿದ ಬಗ್ಗೆ, ಟ್ರಿಬ್ಯುನಲ್ಗೆ ಹೋಗಿದ್ದ ಬಗ್ಗೆ ಮೊದಲು ಕಾಂಗ್ರೆಸ್ ಉತ್ತರ ಕೊಡಲಿ ಎಂದು ಸವಾಲು ಹಾಕಿದ್ದಾರೆ.
ಮೋದಿ ಅವರಿಗೆ ಎರಡು ನಾಲಿಗೆ ಎಂದು ಸಿಎಂ ಸಿದ್ದರಾಮಯ್ಯ ಅವರ ಆರೋಪದ ವಿಚಾರವಾಗಿ, ಪ್ರಧಾನಿ ಮೋದಿಯವರು ನುಡಿದಂತೆ ನಡೆದಿದ್ದಾರೆ. ಸುಳ್ಳು ಮತ್ತು ಭ್ರಷ್ಟಾಚಾರ ಕಾಂಗ್ರೆಸ್ನ ಗಂಗೋತ್ರಿಯಾಗಿದೆ. ರಾಜ್ಯ ಸರ್ಕಾರ ಕೇಂದ್ರದ ವಿರುದ್ಧ ನಿರ್ಣಯ ಅಂಗೀಕಾರ ಮಾಡಿದ್ದು, ನಾವು ಕೇಂದ್ರ ಸರ್ಕಾರದ ಪರ ನಿರ್ಣಯ ಅಂಗೀಕರಿಸಿದ್ದೇವೆ. ಎರಡು ಅಂಗೀಕಾರಗಳು ಜನರ ಮುಂದೆ ಹೋಗಲಿದೆ ಎಂದರು. ಇದನ್ನೂ ಓದಿ: ಸಿದ್ರಾಮುಲ್ಲಾ ಖಾನ್ ಎಂದ ಹೆಗಡೆ ವಿರುದ್ಧ ಸುಮೊಟೋ ಕೇಸ್ ದಾಖಲು