ಬೆಂಗಳೂರು: ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ (Hijab) ನಿಷೇಧ ಮುಂದುವರಿಯಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (B.C.Nagesh) ತಿಳಿಸಿದ್ದಾರೆ.
ಹಿಜಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ (Karnataka High Court) ಆದೇಶ ಕುರಿತು ಇಂದು ಸುಪ್ರೀಂ ಕೋರ್ಟ್ (Supreme Court) ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿತು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ವಿಶ್ವದಾದ್ಯಂತ ಹಿಜಬ್, ಬುರ್ಕಾ ಧರಿಸುವುದನ್ನು ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ನಾವು ನ್ಯಾಯಾಲಯದಿಂದ ಉತ್ತಮ ತೀರ್ಪು ನಿರೀಕ್ಷಿಸಿದ್ದೆವು. ಸುಪ್ರೀಂ ಕೋರ್ಟ್ನಿಂದ ಭಿನ್ನ ತೀರ್ಪು ಬಂದಿರುವ ಕಾರಣ, ಕರ್ನಾಟಕ ಹೈಕೋರ್ಟ್ ಆದೇಶವು ಯಥಾಸ್ಥಿತಿ ಮುಂದುವರಿಯಲಿದೆ. ಹೀಗಾಗಿ ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧವೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಕೇಸ್- ಸುಪ್ರೀಂನಿಂದ ಭಿನ್ನ ತೀರ್ಪು ಪ್ರಕಟ
ಅವರು ಯಾವಾಗಲೂ ಈ ಸಮಾಜವನ್ನು ಒಡೆಯಲು ಬಯಸುತ್ತಾರೆ. ಸಮಾಜವನ್ನು ಒಡೆಯಲು ಹಿಜಬ್ ಬಳಸುತ್ತಿದ್ದಾರೆ ಎಂದು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಬ್ ಧರಿಸುವುದನ್ನು ಬೆಂಬಲಿಸುವ ಸಂಘಟನೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಜಬ್ ವಿಚಾರವಾಗಿ ಕಾಂಗ್ರೆಸ್ ನಿಲುವು ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಎಂದಿಗೂ ಚುನಾವಣೆ ಎದುರಿಸಿಲ್ಲ. ಜನರ ಧಾರ್ಮಿಕ ಭಾವನೆಗಳನ್ನು ಕೇಂದ್ರವಾಗಿಟ್ಟುಕೊಂಡು ಚುನಾವಣೆಗೆ ಇಳಿಯುತ್ತದೆ ಎಂದು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಹಿಜಬ್ ಆಯ್ಕೆಯ ವಿಷಯ: ನ್ಯಾ.ಹೇಮಂತ್ ಗುಪ್ತಾ, ನ್ಯಾ. ಧುಲಿಯಾ ಆದೇಶದಲ್ಲಿ ಏನಿದೆ?