ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಡೈರಿ ಪಾಲಿಟಿಕ್ಸ್ ತೀವ್ರಗೊಂಡಿದ್ದು, ನಿಮ್ಮ ಬಳಿ ಯಾವ ಡೈರಿಗಳನ್ನು ಬಿಡುಗಡೆ ಮಾಡಿ ಅವುಗಳನ್ನು ರಾಜ್ಯ ಸರ್ಕಾರದ ಬಳಿ ಇರುವ ಸಿಐಡಿ, ಎಸಿಬಿ ಸಂಸ್ಥೆಗಳಿಂದ ತನಿಖೆ ಮಾಡಿಸಿ ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸವಾಲು ಹಾಕಿದ್ದಾರೆ.
ನಗದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಯಾವುದೇ ಕಲ್ಪನೆ ಮಾಡಿಕೊಳ್ಳಲು ಹೋಗಲ್ಲ. ಅದೇನು ಡೈರಿಗಳಿದೆ ಬಿಡುಗಡೆ ಮಾಡಿ. ನನಗೂ ಕುತೂಹಲವಿದೆ. ನಿಮ್ಮ ಬಳಿಯೇ ಇರುವ ಸಿಐಡಿ, ಎಸಿಬಿ ಸಂಸ್ಥೆಗಳಿಂದ ತನಿಖೆ ನಡೆಸಿ ಎಂದು ಬಹಿರಂಗ ಸವಾಲು ಎಸೆದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 4 ವರ್ಷದ ಸಾಧನೆಯ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಅಭಿವೃದ್ಧಿ ಕಾರ್ಯವನ್ನು ಹೊಗಳಿದರು. ದೇಶದಲ್ಲಿ ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರ ಭಯದಿಂದ ಒಂದಾಗುತ್ತಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ ಜನರ ಬೆಂಬಲ ಮೋದಿ ಪರ ಇದೆ ಎಂದರು. ಸದ್ಯ ಪಕ್ಷದ ಕಾರ್ಯಕರ್ತರು ಪ್ರಧಾನಿಗಳ ಸಾಧನೆಗಳನ್ನು ಜನರಿಗೆ ತಿಳಿಸಿ, ಇದಕ್ಕಾಗಿ ಕಿರು ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು.
ಕೊಟ್ಟ ಭರವಸೆ ಈಡೇರಿಸಿ: ಸಿಎಂ ಕುಮಾರಸ್ವಾಮಿ ಅವರು ರೈತರಿಗೆ ಭರವಸೆ ಕೊಟ್ಟಂತೆ ನಡೆಯಬೇಕು. 24 ಗಂಟೆಯೊಳಗೆ ಕಾರ್ಯರೂಪಕ್ಕೆ ತರುವ ನಿರೀಕ್ಷೆ ಇತ್ತು. ಇನ್ನೂ ಯಾವ ಯೋಜನೆಯನ್ನು ಕಾರ್ಯರೂಪ ಮಾಡಿಲ್ಲ. ನಾವು ಕಾದು ನೋಡ್ತೇವೆ. ಹೀಗಾಗಿ 15 ದಿನಗಳಿಂದ ನಾನು ರಾಜ್ಯ ಸರ್ಕಾರದ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಕಲಾಂ ಹೆಸರಿಡಲಿ: ಹಜ್ ಭವನ ನಿರ್ಮಾಣದ ಮಾಡಿದ್ದು ನಮ್ಮ ಅವಧಿಯಲ್ಲಿ, ಭವನಕ್ಕೆ ಬೇಕಾದರೆ ಡಾ ಅಬ್ದುಲ್ ಕಲಾಂ ಅವರ ಹೆಸರು ಇಡಲಿ. ಯಾವುದೇ ಕಾರಣಕ್ಕೂ ಟಿಪ್ಪು ಸುಲ್ತಾನ್ ಹೆಸರು ಇಡುವುದು ಬೇಡ. ರಾಜ್ಯದಲ್ಲಿ ಇರುವ ಶಾಂತಿ ಕದಡುವುದು ಬೇಡ ಎಂಬ ಸಲಹೆ ನೀಡಿದರು.
ಐಟಿ ದಾಳಿ ಬಳಿಕ ನೋಟಿಸ್ ಪಡೆದು ವಿಚಾರಣೆ ಎದುರಿಸಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಐಟಿ ದಾಳಿ ವೇಳೆ ಸಿಕ್ಕ ಡೈರಿ ಕುರಿತು ಪ್ರತಿಕ್ರಿಯೆ ನೀಡಿದ್ದರು. ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು? ಯಾರಿಗೆ? ಏನೇನು? ಬರೆದಿದ್ದಾರೆ ಎಂಬುವುದ ಸಹ ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನು ಬಹಿರಂಗ ಮಾಡುತ್ತೇನೆ. ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು ಎಂದು ಪ್ರತಿಕ್ರಿಯಿಸಿದ್ದರು.