ರಾಯಚೂರು: ಕೃಷ್ಣಾ ನದಿ ಪ್ರವಾಹದ ವೇಳೆ ಅಂಬುಲೆನ್ಸ್ಗೆ ದಾರಿ ತೋರಿಸಿ ಸಾಹಸ ಮೆರೆದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ಕೃಷ್ಣಾ ನದಿಯಿಂದ ಉಂಟಾದ ಪ್ರವಾಹಕ್ಕೆ ಹಿರೇರಾಯಕುಂಪಿ- ಗೂಗಲ್ ಸೇತುವೆ ಮುಳುಗಡೆ ಆಗಿತ್ತು. ಈ ವೇಳೆ ಮುಳುಗಡೆಯಾದ ಸೇತುವೆಯಲ್ಲಿ ಮೃತದೇಹ ಹೊತ್ತು ಬರುತ್ತಿದ್ದ ಅಂಬುಲೆನ್ಸ್ ಚಾಲಕನಿಗೆ ರಸ್ತೆ ಎಲ್ಲಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ಆಗ ಬಾಲಕ ವೆಂಕಟೇಶ್ ನೀರಿನಲ್ಲಿ ನಡೆದು ದಾರಿ ತೋರಿಸುವ ಮೂಲಕ ಸಹಾಯ ಮಾಡಿದ್ದನು.
ಈ ಘಟನೆಯನ್ನ ಪಬ್ಲಿಕ್ ಟಿವಿ ಸಹ ವರದಿ ಮಾಡಿತ್ತು. ಬಾಲಕನ ಸಾಹಸದ ಬಗ್ಗೆ ತಿಳಿದ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ. ರಾಯಚೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ಇಂದು ನಡೆದ ಧ್ವಜಾರೋಹಣದ ವೇಳೆ ಜಿಲ್ಲಾಡಳಿತ ಬಾಲಕನಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದೆ.