ಕಠ್ಮಂಡು: ಭಾರೀ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಪರಿಣಾಮ 88 ಜನರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನೇಪಾಳದಲ್ಲಿ ನಡೆದಿದೆ.
ನೇಪಾಳದಲ್ಲಿ ಭಾರೀ ಮಳೆಯ ಪರಿಣಾಮ ಭೂಕುಸಿತ ಉಂಟಾಗಿ 88 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಇನ್ನೂ 11 ಸಾವುಗಳು ವರದಿಯಾದ ನಂತರ ಗುರುವಾರ ಸಾವಿನ ಸಂಖ್ಯೆ 88ಕ್ಕೆ ಏರಿದೆ. ಬುಧವಾರ 63 ಜನರು ಸಾವನ್ನಪ್ಪಿದ್ದು, ಮಂಗಳವಾರ ಸಾವಿನ ಸಂಖ್ಯೆ 14 ಇತ್ತು ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್ಡಿಕೆ ತರಾಟೆ
ಸಚಿವಾಲಯದ ವಿಪತ್ತು ನಿರ್ವಹಣಾ ವಿಭಾಗದ ಪ್ರಕಾರ ಪ್ರವಾಹ, ಭೂಸಿತದಿಂದ 30ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಪೂರ್ವ ನೇಪಾಳದ ಪಂಚತಾರ್ ಜಿಲ್ಲೆಯಲ್ಲಿ ಸುಮಾರು 27 ಜನರು ಸಾವನ್ನಪ್ಪಿದ್ದು, ಅತಿ ಹೆಚ್ಚು ಸಾವುಗಳು ದಾಖಲಾಗಿದೆ. ಇಲಾಮ್ ಮತ್ತು ದೋತಿ ಜಿಲ್ಲೆಗಳಲ್ಲಿ 13 ಸಾವುಗಳು ಸಂಭವಿಸಿದೆ. ಕಾಳಿಕೋಟ್, ಬೈತಾಡಿ, ದಡೆಲ್ಧುರ, ಬಜಾಂಗ್, ಹುಮಲಾ, ಸೋಲುಖುಂಬು, ಪ್ಯುಥಾನ್, ಧಂಕುತ, ಮೊರಾಂಗ್, ಸುನ್ಸಾರಿ ಮತ್ತು ಉದಯಪುರ ಸೇರಿದಂತೆ ಇತರ 15 ಜಿಲ್ಲೆಗಳಿಂದಲೂ ಸಾವುಗಳು ವರದಿಯಾಗಿದೆ ಎಂದು ತಿಳಿಸಿದರು.
ನೇಪಾಳದಲ್ಲಿ 20 ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು, ಬಜಾಂಗ್ ಜಿಲ್ಲೆಯಲ್ಲಿ 21 ಜನರು ನಾಪತ್ತೆಯಾಗಿದ್ದಾರೆ. ಗುರುವಾರದಿಂದ ಹವಾಮಾನ ಪರಿಸ್ಥಿತಿ ಸುಧಾರಿಸುತ್ತಿದೆ. ಭಾನುವಾರದಿಂದ ಈ ಪ್ರದೇಶದಲ್ಲಿ ಹಿಮಪಾತ ಆರಂಭವಾಗಿದ್ದು, ಹವಾಮಾನ ವೈಪರೀತ್ಯದಿಂದಾಗಿ ಬುಧವಾರ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಲಿಲ್ಲ. ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲು ಸ್ಥಳೀಯ ಆಡಳಿತವು ಗೃಹ ಸಚಿವಾಲಯದಿಂದ ಹೆಲಿಕಾಪ್ಟರ್ ನೀಡುವಂತೆ ಕೋರಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಗೃಹ ಸಚಿವ ಬಾಲಕೃಷ್ಣ ಖಂಡ್ ನೇಪಾಳ ಪೊಲೀಸ್, ಸಶಸ್ತ್ರ ಪೊಲೀಸ್ ಪಡೆ, ರಾಷ್ಟ್ರೀಯ ತನಿಖಾ ಇಲಾಖೆ ಮತ್ತು ನೇಪಾಳ ಸೇನೆಗೆ ಹುಮ್ಲಾ ಜಿಲ್ಲೆಯಲ್ಲಿ ಸಿಲುಕಿರುವ ವಿದೇಶಿ ಪ್ರವಾಸಿಗರನ್ನು ಕೂಡಲೇ ರಕ್ಷಿಸುವಂತೆ ಸೂಚಿಸಿದ್ದಾರೆ. ಲಿಮಿ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿದ್ದು, ರಸ್ತೆಯಲ್ಲಿ ಓಡಾಡದಂತೆ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪ್ರವಾದಿ, ಇಸ್ಲಾಂ ಅವಹೇಳನ – ಪ್ರೊ.ಬಿ.ಆರ್.ರಾಮಚಂದ್ರಯ್ಯರನ್ನು ಕೆಲಸದಿಂದ ವಜಾಗೊಳಿಸಿಲು ಆಗ್ರಹ
ನಾಲ್ಕು ಸ್ಲೊವೇನಿಯನ್ ಪ್ರವಾಸಿಗರು ಮತ್ತು ಮೂವರು ಗೈಡ್ಗಳು ಸೇರಿದಂತೆ 12 ಜನರು ಕಠ್ಮಂಡುವಿನಿಂದ 700 ಕಿಮೀ ಪಶ್ಚಿಮದಲ್ಲಿರುವ ಹುಮ್ಲಾ ಜಿಲ್ಲೆಯ ನಖ್ಲಾದಲ್ಲಿ ಸಿಲುಕಿಕೊಂಡಿದ್ದಾರೆ. ಲಿಮಿಯಲ್ಲಿ ಟ್ರೆಕ್ಕಿಂಗ್ ಮುಗಿಸಿ, ಅವರು ಸಿಮಿಕೋಟ್ಗೆ ಮರಳುತ್ತಿದ್ದರು ಎಂದು ಹುಮ್ಲಾ ಮುಖ್ಯ ಜಿಲ್ಲಾ ಅಧಿಕಾರಿ ಗಣೇಶ್ ಆಚಾರ್ಯ ಹೇಳಿದರು.