– ಅಪಾಯ ಮಟ್ಟ ಮೀರಿದ ಧನಸಿರಿ ನದಿ
ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಈಗ ಕೊಂಚ ಸುಧಾರಿಸಿದೆ, ಕಳೆದ 24 ಗಂಟೆಯಲ್ಲಿ ಯಾವುದೇ ಸಾವು – ನೋವುಗಳು ಸಂಭವಿಸಿಲ್ಲ. ಆದಾಗ್ಯೂ ಇಲ್ಲಿನ 6 ಜಿಲ್ಲೆಗಳ ಸುಮಾರು 4.45 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಸಂಕಷ್ಟದ ಪರಿಸ್ಥಿತಿಯಲ್ಲೇ ದಿನದೂಡುವಂತಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ಹೇಳಿದೆ.
ASDMA ಬಿಡುಗಡೆ ಮಾಡಿದ ವರದಿ, ಶಿವಸಾಗರ್, ಗೋಲಾಘಾಟ್, ಚರೈದಿಯೋ, ಜೋರ್ಹಾಟ್, ನಾಗಾಂವ್ ಹಾಗೂ ಕಾಮರೂಪ್ (ಮೆಟ್ರೋಪಾಲಿಟನ್) ಜಿಲ್ಲೆಗಳ ಒಟ್ಟು 4,45,495 ಜನರು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋಲಾಘಾಟ್ ಜಿಲ್ಲೆಯ ನುಮಾಲಿಗಢದಲ್ಲಿ ಧನಸಿರಿ (ದಕ್ಷಿಣ) ನದಿ ಇನ್ನೂ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಪರಿಸ್ಥಿತಿಯಲ್ಲಿ ಸುಧಾರಣೆ
ಇನ್ನೂ ಭಾನುವಾರದವರೆಗೆ (ಜು.26) 5 ಜಿಲ್ಲೆಗಳ 5.24 ಲಕ್ಷಕ್ಕೂ ಹೆಚ್ಚು ಜನ ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದರು. ಆದ್ರೆ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು – ನೋವಿನ ವರದಿಯಾಗಿಲ್ಲ. ಈ ವರ್ಷ ಅಸ್ಸಾಂನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ 68ಕ್ಕೇ ಸ್ಥಿರವಾಗಿದೆ.
ಅದ್ರಲ್ಲೂ ಚರೈದಿಯೋ ಜಿಲ್ಲೆ ಅತ್ಯಂತ ಹೆಚ್ಚು ಹಾನಿಗೊಳಗಾಗಿದ್ದು, 1,88,404 ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಂತರ ಶಿವಸಾಗರ್ (1,44,461) ಹಾಗೂ ಜೋರ್ಹಾಟ್ (74,458) ಜಿಲ್ಲೆಗಳು ಹೆಚ್ಚು ಪರಿಣಾಮಕ್ಕೊಳಗಾಗಿವೆ.
28,000ಕ್ಕೂ ಹೆಚ್ಚು ಜನಕ್ಕೆ 90 ಪರಿಹಾರ ಶಿಬಿರ
ರಾಜ್ಯದಲ್ಲಿ ಪ್ರಸ್ತುತ 90 ಪರಿಹಾರ ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, 28,695 ಸ್ಥಳಾಂತರಗೊಂಡ ಜನರಿಗೆ ಆಶ್ರಯ ಒದಗಿಸಲಾಗಿದೆ. ಜೊತೆಗೆ 94 ಪರಿಹಾರ ವಿತರಣಾ ಕೇಂದ್ರಗಳು ಕೂಡ ಕಾರ್ಯನಿರ್ವಹಿಸುತ್ತಿವೆ.
