ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ (Baahubali) ಚಿತ್ರಗಳು ಇತಿಹಾಸ ಬರೆದಿವೆ. ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚಿವೆ. ಬಾಹುಬಲಿ 1 ಮತ್ತು ಬಾಹುಬಲಿ 2 ಮಾಡಿದ ದಾಖಲೆ ಅಷ್ಟಿಷ್ಟಲ್ಲ. ಒಂದು ವೇಳೆ ಈ ಸಿನಿಮಾ ಸೋತಿದ್ದರೆ ನಿರ್ದೇಶಕ ರಾಜಮೌಳಿ ಯಾವ ಸ್ಥಿತಿಯಲ್ಲಿ ಇರುತ್ತಿದ್ದರು ಎನ್ನುವ ಅಂದಾಜನ್ನು ನಟ ರಾಣಾ ದುಗ್ಗುಬಾಟಿ ಬಿಚ್ಚಿಟ್ಟಿದ್ದಾರೆ. ಬಹುಶಃ ಆ ನೋವಿನಿಂದ ಈಗಲೂ ರಾಜಮೌಳಿ (Rajamouli) ಬರುವುದಕ್ಕೆ ಅಸಾಧ್ಯವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.
ಮಾಧ್ಯಮವೊಂದರ ಸಂವಾದಲ್ಲಿ ಮಾತನಾಡಿರುವ ದಗ್ಗುಬಾಟಿ (Rana Daggubati), ‘ಬಾಹುಬಲಿ ಚಿತ್ರ ಮಾಡಲು ರಾಜಮೌಳಿ ಹೆಚ್ಚಿನ ಮೊತ್ತದ ಬಡ್ಡಿಯೊಂದಿಗೆ ನಾಲ್ಕು ನೂರು ಕೋಟಿ ರೂಪಾಯಿ ಸಾಲ ತಂದಿದ್ದರು ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಶೇಕಡಾ 24ರ ಬಡ್ಡಿಯಲ್ಲಿ ಆ ಹಣವನ್ನು ಸಾಲವಾಗಿ ತಂದಿದ್ದರು ಎಂದು ಹೇಳುವ ಮೂಲಕ ಬೆಚ್ಚಿ ಬೀಳಿಸಿದ್ದಾರೆ. ಬಾಹುಬಲಿ ಸಿನಿಮಾ ಮಾಡುವಾಗಿನ ಆರ್ಥಿಕ ತೊಂದರೆಯನ್ನು ರಾಜಮೌಳಿ ಹೇಳಿದ್ದರು. ಆದರೆ, ಎಷ್ಟು ಎನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ. ಇದನ್ನೂ ಓದಿ:ವರುಣ್ ತೇಜ್- ನಟಿ ಲಾವಣ್ಯ ಎಂಗೇಜ್ಮೇಟ್ ಡೇಟ್ ಫಿಕ್ಸ್
‘ಸಿನಿಮಾದವರು ಹಣ ತರಬೇಕು ಎಂದರೆ ಎರಡೇ ಹಾದಿಗಳಿವೆ. ಒಂದು ಆಸ್ತಿಯನ್ನು ಅಡ ಇಡುವುದು ಅಥವಾ ಮಾರುವುದು. ಮತ್ತೊಂದು ಬಡ್ಡಿ ತೆತ್ತು ಸಾಲ ತರುವುದು. ಈ ಎರಡೂ ಅಪಾಯದ ಮಾರ್ಗಗಳು. ಆದರೆ ವಿಧಿಯಿಲ್ಲ. ಸಿನಿಮಾ ಗೆದ್ದರೆ ಬಚಾವ್ ಆಗುತ್ತೇವೆ. ಸೋತರೆ ಅಷ್ಟೇ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.
ಬಾಹುಬಲಿ ಸಿನಿಮಾ ಹಿಟ್ ಆಯಿತು. ಹಾಗಾಗಿ ಎಲ್ಲರೂ ಬಚಾವ್ ಆದೆವು ಎಂದು ಹೇಳಿರುವ ರಾಣಾ, ಸೋತಿದ್ದರೆ ಅದನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಈಗಲೂ ಆ ಸನ್ನಿವೇಶಗಳು ನನ್ನ ಎದುರಿಗೆ ಬಂದರೆ, ಭಯವಾಗುತ್ತದೆ ಎಂದಿದ್ದಾರೆ ರಾಣಾ. ಈ ಮೂಲಕ ಬಾಹುಬಲಿ ಚಿತ್ರಕ್ಕೆ ರಾಜಮೌಳಿಯು ತಂದಿದ್ದ ಸಾಲದ ಮೊತ್ತವನ್ನು ಅವರು ಬಹಿರಂಗ ಪಡಿಸಿದ್ದಾರೆ