ವಿಜಯ್‌ ಕಾರು ಚಾಲಕನ ಪುತ್ರನಿಗೆ ಖುಲಾಯಿಸಿದ ಅದೃಷ್ಟ – ಗೆಲುವಿನ ಸನಿಹದತ್ತ ಶಬರಿನಾಥನ್‌

2 Min Read

ಚೆನ್ನೈ: ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್‌ ಅವರ ಕಾರು ಚಾಲಕನ ಪುತ್ರನಿಗೆ (Car driver’s son) ಅದೃಷ್ಟ ಖುಲಾಯಿಸಿದೆ. ಟಿವಿಕೆ ಅಭ್ಯರ್ಥಿಯಾಗಿ ವಿರುಗಂಬಕ್ಕಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಬರಿನಾಥನ್ ಈಗ ಗೆಲುವಿನ ಸನಿಹದತ್ತ ಸಾಗಿದ್ದಾರೆ.

ದಳಪತಿ ವಿಜಯ್‌ (Thalapathy vijay) ಅವರ ಆಪ್ತ ಸಹಾಯಕನಾಗಿ ನೇಮಕಗೊಳ್ಳುವುದಕ್ಕೆ ಮುನ್ನ ಹಲವು ವರ್ಷಗಳ ಕಾಲ ಕಾರು ಚಾಲಕನಾಗಿ ಕೆಲಸ ಮಾಡಿದ್ದ ರಾಜೇಂದ್ರನ್‌ ಅವರ ಪುತ್ರ ಶಬರಿನಾಥನ್‌ ಶಾಸಕರಾಗಿ ವಿಧಾನಸಭೆ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ವಿರುಗಂಬಕ್ಕಂ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಪ್ರಭಾಕರನ್‌ ರಾಜ್‌ ಅವರಿಗಿಂತ ಭಾರೀ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

ಕಣ್ಣೀರಿಟ್ಟಿದ್ದ ಶಬರಿನಾಥನ್‌
ದಳಪತಿ ವಿಜಯ್‌ ಎಲ್ಲಾ 234 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸಿದಾಗಲೇ ವಿರುಗಂಬಕ್ಕಂ ಕ್ಷೇತ್ರಕ್ಕೆ ಶಬರಿನಾಥನ್‌ ಹೆಸರು ಘೋಷಿಸಿದ್ದರು. ಈ ವೇಳೆ ಅಪ್ಪ – ಮಕ್ಕಳಿಬ್ಬರೂ ವೇದಿಕೆಯಲ್ಲೇ ವಿಜಯ್‌ ಅವರನ್ನ ಅಪ್ಪಿಕೊಂಡು ಕಣ್ಣೀರಿಟ್ಟಿದ್ದರು. ವಿಜಯ್‌ ಪಾದಗಳನ್ನ ಮುಟ್ಟಿ ಶಬರಿನಾಥನ್‌ ಭಾವುಕರಾಗಿದ್ದರು.

ಒಟ್ಟು 4,654 ಅಭ್ಯರ್ಥಿಗಳು ಸ್ಪರ್ಧೆ
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್‌ ನೇತೃತ್ವದ ಟಿವಿಕೆ, ಎನ್‌ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.

ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ (AIADMK) ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು.

ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು). ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು.

Share This Article