ತಮಿಳುನಾಡು (Tamil Nadu) ರಾಜಕೀಯ ಇತಿಹಾಸದಲ್ಲಿ ಚಿತ್ರರಂಗದ ತಾರೆಯರು ಆಡಳಿತದ ಚುಕ್ಕಾಣಿ ಹಿಡಿದ ಅನೇಕ ಉದಾಹರಣೆಗಳಿವೆ. ಎಂ.ಜಿ ರಾಮಚಂದ್ರನ್, ಜಯಲಲಿತಾ, ಉದಯನಿಧಿ ಸ್ಟಾಲಿನ್ ಹೀಗೆ ಅನೇಕರು ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಈಗ ಅದೇ ಹಾದಿಯಲ್ಲಿ ಸಾಗಿರುವ ‘ದಳಪತಿ‘ ವಿಜಯ್ (Thalapathy vijay), ತಮ್ಮ ‘ತಮಿಳಗ ವೆಟ್ಟಿ ಕಳಗಂ’ (TVK) ಪಕ್ಷದ ಮೂಲಕ 2026ರ ವಿಧಾನಸಭಾ ಚುನಾವಣಾ ಕಣದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ.

ಕಳೆದ 49 ವರ್ಷಗಳಲ್ಲಿ ಯಾವುದೇ ಚಲನಚಿತ್ರ ತಾರೆ ಮಾಡದ ಸಾಧನೆಯನ್ನ ದಳಪತಿ ಮಾಡಿದ್ದಾರೆ. 1977 ರಲ್ಲಿ ಎಂ.ಜಿ. ರಾಮಚಂದ್ರನ್ ನಂತರ ರಾಜಕೀಯ ಪ್ರವೇಶಿಸಿ ಸಿಎಂ ಹುದ್ದೆಗೇರಲಿರುವ ಮೊದಲ ನಟ ಎನ್ನುವ ಸಾಧನೆ ವಿಜಯ್ ಅವರದ್ದಾಗುತ್ತಿದೆ.
ರಾಜಕೀಯ ಅಖಾಡಕ್ಕಿಳಿದ ವಿಜಯ್, ಮೊದಲ ಪ್ರಯತ್ನದಲ್ಲೇ ಸಕ್ಸಸ್ ಕಂಡಿದ್ದಾರೆ. ಈವಗೆರೆ 69 ಚಿತ್ರಗಳಲ್ಲಿ (ಜನನಾಯಗನ್ ಸೇರಿ) ಅಭಿನಯಿಸಿರುವ ಇವರು ದಕ್ಷಿಣ ಭಾರತದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರಾಗಿದ್ದು, ಸದ್ಯ ರಾಜಯಕೀಯ ಜೀವನದಲ್ಲಿ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಅಷ್ಟಕ್ಕೂ ನಟನೆಯಿಂದ ರಾಜಕೀಯದವರೆಗೆ ಅವರ ಈ ಸುದೀರ್ಘ ಪಯಣ ಹೇಗಿತ್ತು ಅನ್ನೋದರ ವಿವರ ಈ ಲೇಖನದಲ್ಲಿ ಕಟ್ಟಿಕೊಡಲಾಗಿದೆ.

ಜೋಸೆಫ್ ವಿಜತ್ ʻದಳಪತಿʼ ಆಗಿದ್ದು ಹೇಗೆ?
1974 ಜೂನ್ 22 ರಂದು ಜನಸಿದ ಜೋಸೆಫ್ ವಿಜಯ್ ಚಂದ್ರಶೇಖರ್ ಮೂಲತಃ ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದಿಂದಲೇ ಬಂದವರು. ತಂದೆ ಎಸ್.ಎ ಚಂದ್ರಶೇಖರ್ ನಿರ್ದೇಶಕರು ಮತ್ತು ತಾಯಿ ಶೋಭಾ ಚಂದ್ರಶೇಖರ್ ಹಿನ್ನೆಲೆ ಗಾಯಕಿಯಾಗಿದ್ದರು. ಮನೆಯಲ್ಲಿದ್ದ ಕಲಾತ್ಮಕ ವಾತಾವರಣವು ವಿಜಯ್ ಅವರನ್ನು ಬಾಲ್ಯದಲ್ಲೇ ಬಣ್ಣದ ಲೋಕದತ್ತ ಸೆಳೆಯಿತು.

ಬಾಲ್ಯದಲ್ಲೇ ಕಲೆಯನ್ನ ಮೈಗೂಡಿಸಿಕೊಂಡಿದ್ದ ವಿಜಯ್ 1992 ರಲ್ಲಿ ತೆರೆ ಕಂಡ ʻನಾಲೈಯ ತೀರ್ಪುʼ ಚಿತ್ರದ ಬಳಿಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆಗ ವಿಜಯ್ ಅವರ ವಯಸ್ಸು 18 ವರ್ಷ. ಇದಕ್ಕೂ ಮುನ್ನವೇ 1984 ರಲ್ಲಿ ತಂದೆ ನಿರ್ದೇಶನದ ʻವೇತ್ರಿʼ ಚಿತ್ರದ ಮೂಲಕ ಬಾಲನಟನಾಗಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈವರೆಗೆ ಬಿಡುಗಡೆ ಆಗಬೇಕಿರುವ ʻಜನ ನಾಯಗನ್ʼ ಸೇರಿ 69 ಚಿತ್ರಗಳಲ್ಲಿ ಅಭಿನಯಿಸಿದ್ದು, ಇಂದು ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಜನಮನ ಗೆದ್ದ ನಟನಿಗೆ ಅಭಿಮಾನಿಗಳೇ ʻದಳಪತಿʼ ಅಂತ ಬಿರುದನ್ನೂ ನೀಡಿದ್ದಾರೆ.

ಸಿನಿ ರಂಗದಲ್ಲಿ ಸಾಲು ಸಾಲು ಸಕ್ಸಸ್!
ಥೇರಿ, ಕತ್ತಿ, ತುಪಾಕಿ, ತಲೈವಾ, ಬಿಗಿಲ್, ರಾಜವಿನ್ ಪರ್ವೈಯಿಲೆ, ಮಿನ್ಸಾರ ಕಣ್ಣ, ಬೀಸ್ಟ್ ಮತ್ತು ಶಹಜಹಾನ್ ಸೇರಿದಂತೆ ಹತ್ತಾರು ಹಿಟ್ ಸಿನಿಮಾಗಳನ್ನ ವಿಜಯ್ ದಳಪತಿ ಸಿನಿ ರಂಗಕ್ಕೆ ಕೊಟ್ಟಿದ್ದಾರೆ. 2023 ರಲ್ಲಿ ಇವರು ಅಭಿನಯಿಸಿದ `ಲಿಯೋ’ ಹಾಗೂ 2024 ರಲ್ಲಿ ತೆರೆ ಕಂಡ ʻ The GOAT’ (Greatest of All Time) ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತು. ಇನ್ನೂ ವಿಜಯ್ ಅವರ ಕೊನೆಯ ಚಿತ್ರ ʻಜನನಾಯಗನ್ʼ ವಿವಾದಕ್ಕೆ ಸಿಲುಕಿದ ಹಿನ್ನೆಲೆ ತೆರೆಗೆ ಬರುವುದು ತಡವಾಗಿದೆ. ಈ ವರ್ಷದ ಆರಂಭದಲ್ಲೇ ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತು. ವಿಜಯ್ ಕೋಟ್ಯಂತರ ಅಭಿಮಾನಿಗಳು ಕೊನೆಯ ಚಿತ್ರ ವೀಕ್ಷಿಸಲು ಕಾದು ಕುಳಿತಿದ್ದರು. ಆದ್ರೆ ಕೆಲ ರಾಜಕೀಯ ಮೇಲಾಟಗಳಿಂದ ಚಿತ್ರವು ತೆರೆ ಕಾಣದೇ ಉಳಿದಿದೆ.

ಇದಕ್ಕೂ ಮುನ್ನ 2018 ರಲ್ಲಿ ತೆರೆ ಕಂಡ ʻಸರ್ಕಾರ್ʼ ಸಿನಿಮಾ ಕೂಡ ಇದೇ ರೀತಿ ವಿವಾದ ಸೃಷ್ಟಿಸಿತ್ತು. ಮತದ ಮೌಲ್ಯ, ನಾಯಕನ ಆಯ್ಕೆ, ಜನಸಂಪನ್ಮೂಲ ಸದ್ಬಳಕೆ ಹಲವು ವಿಷಯಗಳ ಬಗ್ಗೆ ತಿಳಿಸಿಕೊಡಲಾಗಿತ್ತು. ಜೊತೆಗೆ ರಾಜಕೀಯ ಪಕ್ಷಗಳ ಕುತಂತ್ರದ ಬಗ್ಗೆಯೂ ನಿರೂಪಿಸಲಾಗಿತ್ತು. ಆದ್ರೆ ಈ ಚಿತ್ರದಲ್ಲಿ ಕೆಲ ಸರ್ಕಾರಿ ಯೋಜನೆಗಳನ್ನ ತಪ್ಪಾಗಿ ನಿರೂಪಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಕೆಲ ರಾಜಕೀಯ ಪಕ್ಷಗಳು ಪ್ರತಿಭಟನೆ ಕೂಡ ನಡೆಸಿದ್ದವು.

