ರಾಯಚೂರು: ಸುಲಭವಾಗಿ ಸರ್ಕಾರಿ ಕೆಲಸ ಸಿಗುತ್ತೆ ಅಂದ್ರೆ ಅದ್ಯಾರು ಬೇಡ ಅಂತಾರೆ. ಎಷ್ಟು ಜನ ಬೇಕಾದ್ರೂ ಮಾಡೋಕೆ ಸಿದ್ಧರಾಗ್ತಾರೆ. ಇದೇ ಆಸೆಯನ್ನು ಬಂಡವಾಳ ಇಟ್ಕೊಂಡು ರಾಯಚೂರಿನ ಮಂಗಳವಾರಪೇಟೆ ಅಂಗನವಾಡಿ ಶಿಕ್ಷಕಿಯೊಬ್ಬಳು ಸುಮಾರು 40 ಜನ ಮಹಿಳೆಯರಿಗೆ ಅಂಗನವಾಡಿಯಲ್ಲಿ ಕೆಲಸ ಕೊಡಿಸ್ತಿನಿ ಅಂತ ಹೇಳಿ ನಕಲಿ ಆದೇಶ ಪ್ರತಿ ನೀಡಿ ಟೋಪಿ ಹಾಕಿದ್ದಾಳೆ.
ರಾಯಚೂರಿನ ಮಂಗಳವಾರಪೇಟೆ ನಿವಾಸಿ ಈರಮ್ಮ ಕೆಲ್ಸ ಕೊಡಿಸೋದಾಗಿ ಹೇಳಿ ಮೋಸ ಮಾಡಿದ ಅಂಗನವಾಡಿ ಶಿಕ್ಷಕಿ. ಈಕೆ ಸುಮಾರು 40 ಜನರಿಗೆ ಪಂಗನಾಮ ಹಾಕಿದ್ದಾಳೆ. ಜೊತೆಗೆ ಸರ್ಕಾರಿ ಉದ್ಯೋಗದ ಆದೇಶ ಪತ್ರವನ್ನೂ ನಕಲಿ ಮಾಡಿ ಯಾಮಾರಿಸಿದ್ದಾಳೆ.
47 ಲಕ್ಷ ರೂಪಾಯಿ ಜಮಾ ಮಾಡಿಕೊಂಡ ಈರಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಹೆಸರಲ್ಲಿ, ನಕಲಿ ಆದೇಶ ಪತ್ರವನ್ನ ನೀಡಿ ಯಾಮಾರಿಸಿದ್ದಾಳೆ. ಇನ್ನೂ ಕೆಲವರಿಗೆ ಉದ್ಯೋಗ ಕೊಡಿಸ್ತೀನಿ ಅಂತ ಸತಾಯಿಸ್ತಾನೇ ಬಂದಿದ್ದಾಳೆ. ಇದೀಗ ನಕಲಿ ಆದೇಶ ಪತ್ರದ ಅಸಲಿಯತ್ತು ಬಯಲಾಗಿದ್ದು, ವಂಚನೆಗೊಳಗಾದ ಮಹಿಳೆಯರು ಈರಮ್ಮಳನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹಣ ಕೇಳಿದ್ರೆ ಈಗಲೂ ದಬಾಯಿಸಿ ಮಾತನಾಡುವ ಈರಮ್ಮ, ಸಿರವಾರ ಪೊಲೀಸ್ ಠಾಣೆಯ ಎಎಸ್ಐ ಬಿ.ಡಿ ಖಾದ್ರಿ ನನಗೆ ಮೋಸ ಮಾಡಿದ್ದಾನೆ. ಆತನಿಂದ ನನಗೆ ನ್ಯಾಯ ಕೊಡಿಸಿ ಅಂತ ಉಲ್ಟಾ ಹೊಡೀತಿದ್ದಾಳೆ. ಒಟ್ಟಿನಲ್ಲಿ ಮೋಸ ಹೋಗುವವರು ಎಲ್ಲಿಯವರೆಗೂ ಇರುತ್ತಾರೋ ಮೋಸ ಮಾಡುವವರು ಅಲ್ಲಿಯವರೆಗೂ ಇದ್ದೇ ಇರುತ್ತಾರೆ ಅನ್ನೋ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv