ಚಿಕ್ಕೋಡಿ: ಖಾಸಗಿ ವೀಡಿಯೋ ವಿಚಾರ ಬಹಿರಂಗವಾಗುವ ಭೀತಿಯಲ್ಲಿ ಸ್ನೇಹಿತನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ರಾಯಬಾಗದ (Raibagh) ಹಾರೂಗೇರಿ ಪಟ್ಟಣದ ಹೊರವಲಯದ ಬಡಬ್ಯಾಕೂಡ್ನಲ್ಲಿ ನಡೆದಿದೆ.
ಅಕ್ಬರ್ ಜಮಾದಾರ್ (21) ಕೊಲೆಯಾದ ದುರ್ದೈವಿ. ಬಸ್ತವಾಡ ಹೊರವಲಯ ಅರಣ್ಯ ಪ್ರದೇಶದಲ್ಲಿ ಯುವಕನನ್ನು ಕೊಲೆ ಮಾಡಲಾಗಿದೆ. ಬಡಬ್ಯಾಕೂಡ್ನ ಮಹಾಂತೇಶ ಪೂಜಾರ್ (23) ಕೊಲೆಗೈದ ಆರೋಪಿಯಾಗಿದ್ದಾನೆ. ಕೊಲೆಯಾದ ಅಕ್ಬರ್ ಹಾಗೂ ಹಂತಕ ಮಹಾಂತೇಶ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಆಸ್ಪತ್ರೆಗೆ ತೆರಳುವ ನಾಟಕವಾಡಿ ಸೇನೆಗೆ ಸಿಕ್ಕಿಬಿದ್ದ ಉಗ್ರರು
ಆರೋಪಿ ಮಹಾಂತೇಶ್ ಯುವತಿಯೊಬ್ಬಳ ಜೊತೆಗಿನ ಖಾಸಗಿ ವೀಡಿಯೋವನ್ನು ತನ್ನದೇ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಹಣಕಾಸಿನ ವೈಷಮ್ಯದ ವಿಚಾರಕ್ಕೆ ಆ ಮೊಬೈಲ್ನ್ನು ಅಕ್ಬರ್ ಕಸಿದುಕೊಂಡಿದ್ದ. ಆದರೆ ವೀಡಿಯೋ ಎಲ್ಲಿ ಬಹಿರಂಗವಾಗುತ್ತದೆಯೋ ಎಂದು ಮಹಾಂತೇಶ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಆರೋಪಿ ಮಹಾಂತೇಶನನ್ನು ಹಾರೂಗೇರಿ ಪೊಲೀಸರು (Police) ಬಂಧಿಸಿದ್ದಾರೆ.
ಮೃತ ಅಕ್ಬರ್ ಹಾಗೂ ಹಂತಕ ಮಹಾಂತೇಶ ಇಬ್ಬರೂ ಎಮ್ಮೆ ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಇಬ್ಬರ ವಿರುದ್ಧವೂ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಒಂದು ವರ್ಷದಿಂದ ಇಬ್ಬರ ಮಧ್ಯೆ ಹಣಕಾಸು ವ್ಯವಹಾರದಲ್ಲಿ ಇಬ್ಬರ ನಡುವೆ ವೈಷಮ್ಯ ಮೂಡಿತ್ತು. ಈ ವಿಚಾರವಾಗಿ ಸಮೀಪದ ಅರಣ್ಯಕ್ಕೆ ಕರೆದೊಯ್ದು ಮದ್ಯಪಾನ ಮಾಡಿಸಿ ಹರಿತವಾದ ಆಯುಧರಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಪೊಲೀಸರು ಮೊಬೈಲ್ ಜಪ್ತಿ ಮಾಡಿದ್ದು, ಎಫ್ಎಸ್ಎಲ್ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮನೆ ಮುಂದೆಯೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಮಹಿಳೆ
Web Stories