ಗದಗ: ನಗರದ ಕಾರ್ಯನಿರ್ವಾಹಕ ಅಭಿಯಂತರ ಉಪವಿಭಾಗಿಯ ಕಚೇರಿಯ ಡಾಟಾ ಎಂಟ್ರಿ ನೌಕರನೋರ್ವ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.
ವಿವೇಕಾನಂದ ಕಿಲ್ಲಿಪುಟ್ಟಿ ಎಸಿಬಿ ಬಲೆಗೆ ಬಿದ್ದ ಡಾಟಾ ಎಂಟ್ರಿ ನೌಕರ. ವಿವೇಕಾನಂದ ನಗರದ ಭೀಷ್ಮಕೆರೆ ಸಮೀಪ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ 8.90 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮಾಡಲಾಗಿತ್ತು. ಅದರ ಬಾಕಿಬಿಲ್ ಪಾವತಿ ಮಾಡಲು ಗುತ್ತಿಗೆದಾರನಿಗೆ 85 ಸಾವಿರ ರೂ. ಬೇಡಿಕೆ ಇಟ್ಟಿದ್ದ.
ಅಷ್ಟೇ ಅಲ್ಲದೆ ಬಿಲ್ಪಾಸ್ ಮಾಡಲು ಗುತ್ತಿಗೆದಾರರಿಂದ 1 ಲಕ್ಷ ರೂ.ಗೆ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದ. ಹೀಗೆ ಲಂಚ ಪಡೆಯುವಂತೆ ಕಾರ್ಯನಿರ್ವಾಹಕ ಅಭಿಯಂತರ ಹಿರಿಯ ಅಧಿಕಾರಿ ಆರ್.ಜಿ.ಪಾಟೀಲ್ ಸೂಚನೆ ನೀಡಿದ್ದ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಗುತ್ತಿಗೆದಾರ ಪ್ರಕಾಶ ಅವರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.
ಅಧಿಕೃತ ಮಾಹಿತಿ ಮೇರೆಗೆ ಎಸಿಬಿ ಡಿವೈಎಸ್ಪಿ ವಾಸುದೇವ ರಾಮ್ ಹಾಗೂ ಸಿಪಿಐ ಆನಂದ ನೇತೃತ್ವದಲ್ಲಿ ದಾಳಿಮಾಡಿದಾಗ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ವಿವೇಕಾನಂದ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಕಡತಗಳ ಪರಿಶೀಲನೆಗೆ ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv