ಹಾಸನ: ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗುತ್ತಿದ್ದ ನಯವಂಚಕನ ಬಣ್ಣವನ್ನು ಮೊದಲೇ ಪತ್ನಿ ಬಯಲು ಮಾಡಿದ್ದು ನಿನ್ನೆ ನಡೆಯಬೇಕಿದ್ದ ಮದುವೆ ಮುರಿದು ಬಿದ್ದಿದೆ.
ಬೆಂಗಳೂರಿನ (Bengaluru) ಮಧುಸೂದನ್ ಎರಡನೇ ಮದುವೆ ಆಗಲು ಬಂದು ಸಿಕ್ಕಿಬಿದ್ದ ಭೂಪ. ತಮ್ಮ ಮಗಳಿಗೆ ಆಗುತ್ತಿದ್ದ ಅನ್ಯಾಯ ತಪ್ಪಿದ್ದು ಯುವತಿ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇಂತಹ ಹೆಣ್ಣುಬಾಕನನ್ನು ತಕ್ಕಶಾಸ್ತಿ ಆಗಬೇಕೆಂದು ಮದುವೆಗೆ ಬಂದಿದ್ದವರು ಹಿಡಿಶಾಪ ಹಾಕಿದರು. ಇದನ್ನೂ ಓದಿ: ಒಬ್ಬಳ ಹಿಂದೆ ಬಿದ್ದ ಇಬ್ಬರು ಹುಡುಗ್ರು – ಪ್ರೀತಿ ವಿಚಾರಕ್ಕೆ ನಡೀತು ಎರಡು ಗ್ಯಾಂಗ್ ಮಧ್ಯೆ ಗುದ್ದಾಟ
ಹೌದು, ಬೆಂಗಳೂರು ಚಿಕ್ಕಸಂದ್ರದ (Chikkasandra) ಇಂದ್ರೇಶ್-ಅನಿತ ದಂಪತಿ ಪುತ್ರ ಮಧುಸೂದನ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ನಾಲ್ಕು ವರ್ಷದ ಹಿಂದೆ ವಸುಧ ಜೊತೆ ಮದುವೆಯಾಗಿ ಸಂಸಾರ ನಡೆಸುತ್ತಿದ್ದ. ಆದರೂ ಮತ್ತೊಂದು ಮದುವೆ ಆಗಲು ಸ್ಕೆಚ್ ಹಾಕಿ ಹಾಸನ (Hassan) ಮೂಲದ ಯುವತಿಯನ್ನು ಬಂದು ನೋಡಿಕೊಂಡು ಹೋಗಿದ್ದ. ಹುಡುಗಿ ಮನೆಯವರಿಗೆ ಇನ್ನಿಲ್ಲದ ಸುಳ್ಳು ಹೇಳಿ ನಂಬಿಸಿದ್ದ. ಈತನ ಮಾತಿಗೆ ಮರುಳಾದ ಯುವತಿ ಪೋಷಕರು ಮದುವೆ ಮಾಡಲು ಒಪ್ಪಿಕೊಂಡು ನಿಶ್ಚಿತಾರ್ಥ ಮಾಡಿದ್ದರು. ನಿನ್ನೆ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಟುಕೊಂಡಿದ್ದರು. ಮಧುಸೂದನ್ ಪೋಷಕರು, ಇಬ್ಬರು ಅಕ್ಕಂದಿರು ಹಾಗೂ ಅವರ ಗಂಡಂದಿರು ಮಾತ್ರ ರಿಸಪ್ಷನ್ನಲ್ಲಿ ಭಾಗವಹಿಸಿದ್ದರು.
ಇಂದು ಹಾಸನದ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ನಡೆಯಬೇಕಿತ್ತು. ಆದರೆ ಮದುವೆಗೂ ಕೂಡ ವರನ ಕಡೆಯಿಂದ ಬೆರಳೆಣಿಕೆಯಷ್ಟು ಮಂದಿ ಮಾತ್ರ ಭಾಗವಹಿಸಿದ್ದರು. ಇನ್ನೇನು ತಾಳಿ ಕಟ್ಟಲು ಕೆಲ ಸಮಯ ಮಾತ್ರ ಉಳಿದಿತ್ತು. ಅಷ್ಟರಲ್ಲಿ ಕಲ್ಯಾಣಮಂಟಪದ ಮಾಲೀಕರಿಗೆ ಮೊದಲನೇ ಪತ್ನಿ ವಸುಧ ಕರೆ ಮಾಡಿ ನಿಜಾಂಶ ತಿಳಿಸಿದ್ದಾರೆ. ಕೂಡಲೇ ಓಡಿ ಬಂದ ಮಾಲೀಕರು ವಧುವಿನ ಪೋಷಕರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಮದುವೆಯನ್ನು ನಿಲ್ಲಿಸಿದ್ದಾರೆ. ಇಷ್ಟಾದರೂ ಮಧುಸೂದನ್ ಮಾತ್ರ ತನಗೇನು ಗೊತ್ತಿಲ್ಲದಂತೆ ನಾಟವಾಡಲು ಶುರುಮಾಡಿದ್ದ. ಕೊನೆಗೆ ವಧುವಿನ ಸಂಬಂಧಿಕರು ಆತನನ್ನು ಹಿಡಿದುಕೊಂಡು ಕೇಳಿದಾಗ ನಿಜಾಂಶ ಬಾಯ್ಬಿಟ್ಟಿದ್ದಾನೆ. ಇದನ್ನೂ ಓದಿ: ನಿಮ್ಮ ಮುಖ್ಯಮಂತ್ರಿಯನ್ನು ನೀವೇ ಆರಿಸಿ – ಗುಜರಾತ್ನಲ್ಲಿ ಕೇಜ್ರಿವಾಲ್ ಅಭಿಯಾನ
ಮಧುಸೂದನ್ ಎರಡನೇ ಮದುವೆಯಾಗಲು ಮೆಗಾಪ್ಲಾನ್ ಮಾಡಿದ್ದ. ಇಂದು ಬೆಳಿಗ್ಗೆಯಿಂದಲೂ ಬೇಗ ತಾಳಿ ಕಟ್ಟಿಸಿ ಒಂದು ಗಂಟೆಯೊಳಗೆ ಹೋಗಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿದ್ದ. ಅಲ್ಲದೇ ಹನಿಮೂನ್ಗೆ ಮಾಲ್ಡೀವ್ಸ್ಗೆ ಎರಡು ಟಿಕೆಟ್ ಬುಕ್ ಮಾಡಿದ್ದ. ನಾಳೆ ಬೆಳಗ್ಗೆ ಆರು ಗಂಟೆಗೆ ವಧು-ವರರಿಬ್ಬರು ಮಾಲ್ಡೀವ್ಸ್ಗೆ ಹಾರಬೇಕಿತ್ತು. ಅಷ್ಟರಲ್ಲಿ ಮೊದಲನೇ ಪತ್ನಿಯ ಸಮಯಪ್ರಜ್ಞೆಯಿಂದ ಅಮಾಯಕ ಯುವತಿಗೆ ಆಗುತ್ತಿದ್ದ ವಂಚನೆ ತಪ್ಪಿದಂತಾಗಿದೆ.
ಮಧುಸೂದನ್ನನ್ನು ಬಡಾವಣೆ ಪೊಲೀಸರು ವಶಕ್ಕೆ ಪಡೆದಿದ್ದು ಮೊದಲನೇ ಪತ್ನಿ ವಸುಧ ಬೆಂಗಳೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಇತ್ತ ಸಂಭ್ರಮದಲ್ಲಿದ್ದ ವಧುವಿನ ಮನೆಯವರು ಮಗಳ ಜೀವನ ಹಾಳುಗುತ್ತಿದ್ದು ತಪ್ಪಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ.