ಚಿಕ್ಕಮಗಳೂರು: ಕಳ್ಳತನ ಆಗಿದೆ ಅಂತ ಪೊಲೀಸ್ ಸ್ಟೇಷನ್ಗೆ ಬರುವ ನೊಂದವರಿಗೆ ಧೈರ್ಯ ತುಂಬಬೇಕಾದ ಪೊಲೀಸರೇ ಒಬ್ಬ ವ್ಯಕ್ತಿಯನ್ನ ಹೆದರಿಸಿ, ಬೆದರಿಸಿ ಲಕ್ಷಾನುಗಟ್ಟಲೇ ದೋಚಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಇನ್ಸ್ ಪೆಕ್ಟರ್ ಲಿಂಗರಾಜ್ ದರೋಡೆಯ ಮೈನ್ ಲೀಡರ್ ಆಗಿದ್ದಾರೆ. ಕಳೆದ ಐದು ತಿಂಗಳ ಹಿಂದೆ ಆನ್ ಡ್ಯೂಟಿಯಲ್ಲಿದ್ದಾಗ ಬಂಗಾರದ ವ್ಯಾಪಾರಿ (Gold Businessman) ಯನ್ನ ದರೋಡೆ ಮಾಡಿದ ಆರೋಪ ಇವರ ಮೇಲಿದೆ. ಕಳೆದ ಮೇ 11ರಂದು ದಾವಣಗೆರೆ ಮೂಲದ ಭಗವಾನ್ ಸಾಂಕ್ಲಾ, ಅಂಗಡಿಗಳಿಗೆ ಬಂಗಾರ ಕೊಡಲು 2 ಕೆ.ಜಿ. 450 ಗ್ರಾಂ ಬಂಗಾರದ ತರುತ್ತಿದ್ದರು. ಇದನ್ನೂ ಓದಿ: ಅಜ್ಞಾತ ಸಖಿ ಸಹವಾಸ, ಲಕ್ಷ ಲಕ್ಷ ಗೋತ – ಬಣ್ಣದ ಮಾತಿನಿಂದ 41 ಲಕ್ಷ ಪೀಕಿದ ಮಾಯಾಂಗನೆ!
ಇದೇ ಸಮಯಕ್ಕೆ ಕರ್ತವ್ಯದಲ್ಲಿದ್ದ ಲಿಂಗರಾಜ್ ಹಾಗೂ ಮತ್ತೆ ಮೂವರು ಪೇದೆಗಳು ಗಾಡಿಯನ್ನ ವಿಚಾರಿಸಿದ್ದಾರೆ. ಬಳಿಕ ಗಾಡಿ ಸ್ಟೇಷನ್ಗೆ ಹೊಡೆಯಲು ಹೇಳಿದ್ದಾರೆ. ಅವರು ಏಕೆ ಎಂದು ಪ್ರಶ್ನಿಸಿದ್ದಕ್ಕೆ ಚಿನ್ನವನ್ನ ಕೊಟ್ಟು ಹೋಗು ಇಲ್ಲ 10 ಲಕ್ಷ ಹಣ ಕೊಡು ಎಂದು ಬೇಡಿಕೆ ಇಟ್ಟಿದ್ದಾರೆ. ಆಗ ಮಾತುಕತೆ ಮಾಡಿ ಐದು ಲಕ್ಷಕ್ಕೆ ಸೆಟ್ಲ್ ಮೆಂಟ್ ಮಾಡಿ ಹಣ ಪಡೆದು ವಾಪಸ್ ಹೋಗಿದ್ದಾರೆ ಎಂದು ಭಗವಾನ್ ದೂರಿನಲ್ಲಿ ದಾಖಲಿಸಿದ್ದಾರೆ.
ಚಿಕ್ಕಮಗಳೂರು ಎಸ್ಪಿ ಸುದೀರ್ಘ ವಿಚಾರಣೆ ಬಳಿಕ ಇದೀಗ ಲಿಂಗರಾಜು, ಧನಪಾಲ್ ನಾಯ್ಕ್, ಓಂಕಾರಮೂರ್ತಿ, ಶರತ್ ರಾಜ್ ವಿರುದ್ಧ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ಶುರುವಾಗಿದೆ.