ಶಿವಮೊಗ್ಗ: ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು (Code Of Conduct), ಈ ಬೆನ್ನಲ್ಲೇ ಶಿವಮೊಗ್ಗದ ದಂಪತಿ ತಮಿಳುನಾಡಿನ ಸೇಲಂನಲ್ಲಿ ಇಕ್ಕಟ್ಟಿಗೆ ಸಿಲುಕಿದ ಪ್ರಸಂಗವೊಂದು ನಡೆದಿದೆ.
ಮಗನ ಮದುವೆಯ ಹಿನ್ನೆಲೆಯಲ್ಲಿ ಬಟ್ಟೆ ಖರೀದಿ ಮಾಡಲು ಹಾ.ನ.ವಿಜಯೇಂದ್ರ ದಂಪತಿ ಶಿವಮೊಗ್ಗದಿಂದ ಸೇಲಂಗೆ ತೆರಳಿದ್ದರು. ಈ ವೇಳೆ ಕಾರಿನಲ್ಲಿ ಬರುವಾಗ ಈರೋಡ್ ಚೆಕ್ ಪೋಸ್ಟ್ ಬಳಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಮದುವೆಯ ಹಿನ್ನೆಲೆಯಲ್ಲಿ ಖರೀದಿಸಿದ್ದ 40 ಸಾವಿರ ಮೌಲ್ಯದ ಸೀರೆ, 40 ಸಾವಿರ ನಗದು, ಪತ್ನಿ ಬಳಿ ಇದ್ದ 3 ಸಾವಿರವನ್ನು ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮದುವೆ ಆಮಂತ್ರಣ ಪತ್ರ, ದಾಖಲೆ ತೋರಿಸಿದರೂ ಚುನಾವಣಾ ಅಧಿಕಾರಿಗಳು ಒಪ್ಪಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ (Shivamogga) ದಂಪತಿ ಬೆಳಗ್ಗೆಯಿಂದ ಉಪಹಾರ ಇಲ್ಲದೇ ಪರದಾಟ ಅನುಭವಿಸಿದ್ದಾರೆ. ದಂಪತಿ ಬಳಿ ಇದ್ದ ಹಣವನ್ನೆಲ್ಲಾ ಕೂಡ ವಶಕ್ಕೆ ಪಡೆದಿದ್ದಾರೆ.
ಒಟ್ಟಾರೆ ಚುನಾವಣಾ ಅಧಿಕಾರಿಗಳ ಧೋರಣೆಯಿಂದ ಕನ್ನಡಿಗರು ತಮಿಳುನಾಡಿನಲ್ಲಿ (Tamilnadu) ಪರದಾಟ ಅನುಭವಿಸುವಂತಾಗಿದೆ. ವಶಕ್ಕೆ ಪಡೆದ ವಸ್ತು, ಹಣ ವಾಪಸ್ ನೀಡುವಂತೆ ದಂಪತಿ ಕಣ್ಣೀರು ಹಾಕುತ್ತಿದ್ದಾರೆ.