ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ನರ್ಸ್ ಸರ್ಟಿಫಿಕೇಟ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅಶ್ವಥ್ ನಾರಾಯಣ ರಾಜಕೀಯಕ್ಕೆ ಬರುವುದಕ್ಕೂ ಮೊದಲು ನರ್ಸ್ ಸರ್ಟಿಫಿಕೇಟ್ ದಂಧೆ ಮಾಡುತ್ತಿದ್ದರು ಎಂದು ನೇರ ಆರೋಪ ಮಾಡಿದರು.
ಪಿಎಸ್ಐ ಅಕ್ರಮದಲ್ಲಿ ಅಶ್ವಥ್ ನಾರಾಯಣ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನು ಅಶ್ವಥ್ ನಾರಾಯಣ ಪರ ಮಾತನಾಡಿಲ್ಲ. ಕಾಂಗ್ರೆಸ್ ದಾಖಲೆ ಇಟ್ಟು ಮಾತನಾಡಬೇಕು ಎಂದು ಹೇಳಿದ್ದೇನೆ ಅಷ್ಟೇ. ದಾಖಲೆ ಇದ್ದರೆ ಕಾಂಗ್ರೆಸ್ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
ಅಶ್ವಥ್ ನಾರಾಯಣ ಪರೀಕ್ಷೆಗಳನ್ನು ಮಾಡಿಸುವುದರಲ್ಲಿ ದೊಡ್ಡ ಅನುಭವ ಇರುವ ವ್ಯಕ್ತಿ. ಅದನ್ನು ಕಾಂಗ್ರೆಸ್ನವರು ಮಾತನಾಡಲಿ. ನರ್ಸ್ಗಳಿಗೆ ಸರ್ಟಿಫಿಕೇಟ್ ನೀಡುವುದಕ್ಕೆ ಒಂದು ಟೀಂ ಇತ್ತು. ಇದಕ್ಕಾಗಿಯೇ ಅಶ್ವಥ್ ನಾರಾಯಣ ಅವರಿಗೆ ಒಂದು ಹೆಸರು ಇತ್ತು ಎಂದು ಆರೋಪಿಸಿದರು. ಇದನ್ನೂ ಓದಿ: ಇಟಲಿ ಹಾಗೂ ಕರ್ನಾಟಕದ ನಡುವಿನ ಬಾಂಧವ್ಯ ವೃದ್ಧಿಗೆ ಸಂಪೂರ್ಣ ಸಹಕಾರ: ಬೊಮ್ಮಾಯಿ
ಅಶ್ವಥ್ ನಾರಾಯಣ ಅವರು ನಾನು ವಿಶ್ವ ಒಕ್ಕಲಿಗ ಎಂದು ಹೇಳುತ್ತಾರೆ. ಯಾವ ವಿಶ್ವ ಒಕ್ಕಲಿಗ ಎಂಬುದೇ ಗೊತ್ತಿಲ್ಲ. ರಾಜಕಾರಣಕ್ಕೆ ಬರುವುದಕ್ಕೂ ಮೊದಲು ಎಂತಹವರಿಗೆ ನರ್ಸ್ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎಲ್ಲಾ ತಿಳಿದಿದೆ ಎಂದು ಬಾಂಬ್ ಹಾಕಿದರು. ಇದನ್ನೂ ಓದಿ: ಸರ್ಕಾರಕ್ಕೆ ಸವಾಲು ಹಾಕುತ್ತೇನೆ, ತಾಕತ್ತಿದ್ರೆ ನನ್ನನ್ನು ಅರೆಸ್ಟ್ ಮಾಡಲಿ: ಪ್ರಿಯಾಂಕ್ ಖರ್ಗೆ
ಎಕ್ಸಾಂ ಬರೆಯದವರಿಗೆ, ಎಕ್ಸಾಂಗೆ ಬಾರದೇ ಇರುವವರಿಗೂ ಸರ್ಟಿಫಿಕೇಟ್ ಕೊಟ್ಟಿರುವ ಇತಿಹಾಸ ಇದೆ. ಇಂತಹ ಸರ್ಕಾರ ಇದು. ಇಂತಹ ಮಂತ್ರಿಗಳು ಈ ಸರ್ಕಾರದಲ್ಲಿ ಇದ್ದಾರೆ. ಪಿಎಸ್ಐ ಅಕ್ರಮದಲ್ಲಿ ರಾಜ್ಯ ಸರ್ಕಾರ ಮೌನವಾಗಿದೆ. ಸರ್ಕಾರದ ಈ ವರ್ತನೆ ನೋಡಿದರೆ, ಆರೋಪವನ್ನು ಸರ್ಕಾರ ಒಪ್ಪಿಕೊಂಡಂತಿದೆ. ಮೌನಂ ಸಮ್ಮತಿ ಲಕ್ಷಣಂ ರೀತಿ ಸರ್ಕಾರ ವರ್ತಿಸುತ್ತಿದೆ ಎಂದು ಟೀಕಿಸಿದರು.