ವಾಷಿಂಗ್ಟನ್: ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಗೆ ಸಂಬಂಧಿಸಿದಂತೆ ರಷ್ಯಾದ ಪ್ರಸ್ತಾಪವನ್ನು ಭಾರತ ಒಪ್ಪಿಕೊಳ್ಳುವುದು, ರಷ್ಯಾ ಮೇಲಿನ ಅಮೆರಿಕ ನಿರ್ಬಂಧಗಳ ಉಲ್ಲಂಘನೆಯಾಗುವುದಿಲ್ಲ ಎಂದು ಶ್ವೇತ ಭವನ ತಿಳಿಸಿದೆ.
ನಾವು ಜಾರಿಗೆ ತಂದಿರುವ ಮತ್ತು ಶಿಫಾರಸು ಮಾಡಿದ ನಿರ್ಬಂಧಗಳಿಗೆ ಬದ್ಧವಾಗಿರುವಂತೆ ಇತರೆ ದೇಶಗಳಿಗೆ ಅಮೆರಿಕ ಸಂದೇಶ ರವಾನಿಸುತ್ತದೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾದ ಆಕ್ರಮಣ ಪ್ರತಿಭಟಿಸಲು ಕಚ್ಚಾ ತೈಲ, ಅನಿಲ ಖರೀದಿಯನ್ನು ನಿಲ್ಲಿಸಬೇಕು: ಇಂಗ್ಲೆಂಡ್ ಪ್ರಧಾನಿ
ರಿಯಾಯಿತಿ ದರದ ಕಚ್ಚಾ ತೈಲದ ರಷ್ಯಾದ ಪ್ರಸ್ತಾಪವನ್ನು ಭಾರತ ಕೈಗೆತ್ತಿಕೊಳ್ಳುವ ಸಾಧ್ಯತೆಯ ಕುರಿತು ಪ್ರಶ್ನಿಸಿದಾಗ, ಇದು ಅಮೆರಿಕ ನಿರ್ಬಂಧಗಳ ಉಲ್ಲಂಘಿಸುತ್ತದೆ ಎಂದು ನಾನು ನಂಬುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ, ಇತಿಹಾಸದ ಪುಟಗಳನ್ನು ಬರೆಯುವ ಈ ಸಂದರ್ಭದಲ್ಲಿ ನೀವು ಎಲ್ಲಿ ನಿಲ್ಲಬೇಕೆಂದು ಯೋಚಿಸಿ. ರಷ್ಯಾದ ನಾಯಕತ್ವಕ್ಕೆ ಬೆಂಬಲ ನೀಡುವುದು, ಆಕ್ರಮಣನ್ನು ಬೆಂಬಲಿಸಿದಂತೆ. ಅದು ನಿಸ್ಸಂಶಯವಾಗಿ ವಿನಾಶಕಾರಿ ಪರಿಣಾಮವನ್ನು ಬೀರುತ್ತದೆ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್ಗೆ ಸಹಾಯ ಮಾಡಿದರೆ ನಿಮಗೆ ನೀವೇ ಸಹಾಯ ಮಾಡಿದ ಹಾಗೇ: ಝೆಲೆನ್ಸ್ಕಿ
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಬೆಂಬಲಿಸಲಿಲ್ಲ. ಮಾತುಕತೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವಂತೆ ನವದೆಹಲಿಯು ಎಲ್ಲಾ ಮಧ್ಯಸ್ಥಗಾರರನ್ನು ಕೇಳಿಕೊಂಡಿದೆ. ಆದಾಗ್ಯೂ ರಷ್ಯಾ ವಿರುದ್ಧದ ವಿಶ್ವಸಂಸ್ಥೆಯ ಎಲ್ಲಾ ನಿರ್ಣಯಗಳಿಂದ ಭಾರತ ದೂರವಿತ್ತು.
ರಷ್ಯಾದ ತೈಲವನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಭಾರತ ಚಿಂತನೆ ನಡೆಸುತ್ತಿದೆ ಎಂಬ ವರದಿಗಳ ಬಗ್ಗೆ ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ಡಾ. ಅಮಿ ಬೆರಾ ಬೇಸರ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಮತ್ತು ಕ್ವಾಡ್ನ ನಾಯಕನಾಗಿ, ಪುಟಿನ್ ಮತ್ತು ಅವರ ಆಕ್ರಮಣವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಭಾರತದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.