ಅನಧಿಕೃತ ಟೋಲ್ ರದ್ದಾಗದೆ ವಾಪಸ್ ಹೋಗಲ್ಲ- ಧರಣಿ ಕೂತ ʼಆಪತ್ಪಾಂಧವ ಆಸೀಫ್ʼ

Public TV
2 Min Read
SURATHKAL TOLL PROTEST 2

ಮಂಗಳೂರು: ಸುರತ್ಕಲ್‍ನ ಎನ್‍ಐಟಿಕೆ ಟೋಲ್ ಗೇಟ್ ವಿರುದ್ಧ ಸಮಾಜ ಸೇವಕ ಆಸೀಫ್ ಆಪತ್ಬಾಂಧವ ಅವರು ಟೋಲ್ ಸಮೀಪ ಅಹೋರಾತ್ರಿ ಧರಣಿ ಕೂತಿದ್ದು ವಿವಿಧ ಸಮಾಜಸೇವಾ ಸಂಘಟನೆಗಳು ಬೆಂಬಲಕ್ಕೆ ನಿಂತಿವೆ.

SURATHKAL TOLL PROTEST 1

ಧರಣಿ ಸತ್ಯಾಗ್ರಹದ ವೇಳೆ ಮಾತಾಡಿದ ಆಸೀಫ್ ಅವರು, ಕೆಲವೇ ಕಿ.ಮೀ ಅಂತರದಲ್ಲಿ ಎನ್‍ಐಟಿಕೆ ಮತ್ತು ಹೆಜಮಾಡಿ ಟೋಲ್ ಗೇಟ್‍ಗಳನ್ನು ಹೆದ್ದಾರಿ ಪ್ರಾಧಿಕಾರ ನಿರ್ಮಾಣ ಮಾಡಿದ್ದು ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗುತ್ತಿದೆ. ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಳೆದ ಹಲವು ಸಮಯಗಳಿಂದ ಎನ್‍ಐಟಿಕೆ ಟೋಲ್ ಗೇಟ್ ರದ್ದಾಗುತ್ತದೆ ಎಂದು ಹೇಳಿಕೊಂಡೇ ಬರುತ್ತಿದ್ದಾರೆ. ಆದರೆ ಇಲ್ಲಿನ ಟೋಲ್ ಮಾತ್ರ ಮುಚ್ಚಿಲ್ಲ. ನಾನು ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹೇಳಿದಂತೆಯೇ ಇಲ್ಲಿನ ಟೋಲ್ ವಿರುದ್ಧ ಅಹೋರಾತ್ರಿ ಹೋರಾಟಕ್ಕೆ ಇಳಿದಿದ್ದೇನೆ. ಟೋಲ್ ರದ್ದಾಗದ ಹೊರತು ಇಲ್ಲಿಂದ ವಾಪಾಸ್ ಹೋಗುವುದಿಲ್ಲ. ಟೋಲ್ ಕಾರ್ಮಿಕರ ಗೂಂಡಾಗಿರಿ ಮಿತಿಮೀರಿದ್ದು ಕೂಡಲೇ ಇಲ್ಲಿನ ಟೋಲ್ ಗೇಟ್ ರದ್ದುಪಡಿಸಿ ಜನರನ್ನು ನೆಮ್ಮದಿಯಿಂದ ಉಸಿರಾಡಲು ಬಿಡಿ” ಎಂದು ಅಗ್ರಹಿಸಿದರು. ಇದನ್ನೂ ಓದಿ: ಕೊರಗಜ್ಜನಿಗೆ ಅವಮಾನ ಮಾಡಿದ್ದ ಉಮರುಲ್ಲಾ ಬಾಷಿತ್ ಅರೆಸ್ಟ್

NITK TOLL MANGALURU

ಆಂಬುಲೆನ್ಸ್, ಮೂಲಭೂತ ಸೌಕರ್ಯವಿಲ್ಲ:
ಹೆಜಮಾಡಿ ಟೋಲ್ ಗೇಟ್‍ನಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಮುಕ್ಕ ಟೋಲ್ ಗೇಟ್ ತಾತ್ಕಾಲಿಕ ಎಂದು ಪ್ರಾರಂಭದಿಂದಲೂ ಹೇಳಿಕೊಂಡು ಬರುತ್ತಿದ್ದಾರೆ. ಆದರೆ ಹೆಜಮಾಡಿಯಲ್ಲಿ ಟೋಲ್ ನಿರ್ಮಾಣವಾದ ಬಳಿಕವೂ ಇದನ್ನು ಮುಂದುವರಿಸಿದ್ದಾರೆ. ಇಲ್ಲಿ ಟೋಲ್ ಗೇಟ್ ಎಂದು ಹೇಳಿಕೊಳ್ಳಲು ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ, ಶೌಚಾಲಯ ಸಹಿತ ಯಾವೊಂದು ವ್ಯವಸ್ಥೆಯೂ ಇಲ್ಲ. ಇದರಿಂದ ಅದೆಷ್ಟೋ ಬಾರಿ ಅಪಘಾತ ನಡೆದಾಗ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲು ಪರದಾಡಬೇಕಾಗುತ್ತದೆ. ಇದರಿಂದ ಗಾಯಾಳು ಸಕಾಲಕ್ಕೆ ಚಿಕಿತ್ಸೆ ಸಿಗದೇ ಪ್ರಾಣ ತೆತ್ತ ಎಷ್ಟೋ ಉದಾಹರಣೆಗಳಿವೆ. ಇಂತಹ ಅನಧಿಕೃತ ಟೋಲ್ ಗೇಟ್ ಕಾರ್ಮಿಕರು ಹಲವಾರು ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು ವಾಹನ ಸವಾರರು ಭಯಗ್ರಸ್ಥರಾಗಿಯೇ ಸಂಚಾರ ನಡೆಸಬೇಕಾಗಿದೆ ಎಂದು ಸಮಾಜ ಸೇವಕ ಆಸೀಫ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಜಬ್ ವಿವಾದ ವ್ಯವಸ್ಥಿತ ಷಡ್ಯಂತ್ರ: ಬಿಜೆಪಿ ಆರೋಪ

ಧರಣಿಯಲ್ಲಿ ಪಾಲ್ಗೊಂಡಿದ್ದ ಉದ್ಯಮಿ ಹರೀಶ್ ಪುತ್ರನ್ ಮಾತನಾಡಿ, ಎನ್‍ಐಟಿಕೆಯಲ್ಲಿ ಟೋಲ್ ಗೇಟ್ ಸಂಪೂರ್ಣವಾಗಿ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆ. ಇಲ್ಲಿ ಹಿಂದೆ ಟೋಲ್ ವಿರೋಧಿ ಹೋರಾಟ ಸಮಿತಿ ನಡೆಸಿದ್ಧ ಅವಿರತ ಹೋರಾಟದಿಂದಾಗಿ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೆ ನಂತರದ ದಿನಗಳಲ್ಲಿ ಹೋರಾಟ ಸಮಿತಿಯು ಸ್ಥಳೀಯ ಶಾಸಕರು ಮತ್ತು ಸಂಸದರನ್ನು ಟೋಲ್ ರದ್ದು ಮಾಡುವಂತೆ ಮನವಿ ಮಾಡುತ್ತಲೇ ಬಂದಿದ್ದರೂ ಕಿವಿಗೊಡದೆ ಟೋಲ್ ಗೇಟ್ ಗೂಂಡಾಗಿರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಇಲ್ಲಿನ ಟೋಲ್ ವಿರುದ್ಧ ಈಗಾಗಲೇ ಹೇಳಿರುವಂತೆ ಸಮಾಜ ಸೇವಕ ಆಸೀಫ್ ಅವರು ಜನರ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಹೋರಾಟಕ್ಕೆ ಜನರು ತಮ್ಮ ಧ್ವನಿಗೂಡಿಸಿದಲ್ಲಿ ಫಲಿತಾಂಶ ಸಿಗಲಿದೆ ಎಂದರು.

SURATHKAL TOLL PROTEST

ಎಸ್ ಡಿಪಿಐ ಮೂಲ್ಕಿ ಮೂಡಬಿದ್ರೆ ವಲಯ ಅಧ್ಯಕ್ಷ ಅಶ್ರಫ್ ಕೋಟೆಬಾಗಿಲು, ರಿಲಯನ್ಸ್ ಬೊಳ್ಳೂರು ಸಂಘಟನೆ ಮುಖಂಡ ಹಾರಿಸ್ ಇಂದಿರಾನಗರ, ಲಾರಿ ಮಾಲಕರ ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಮನ್ಸೂರ್ ಅಹ್ಮದ್, ಸಮಾಜ ಸೇವಕ ನಿಜಾಮ್ ಪಡುಬಿದ್ರೆ, ಜೆ. ಶ್ರೀಯಾನ್, ಪ್ರಶಾಂತ್ ಕಾಂಚನ್ ಕೊಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *