ಬೆಂಗಳೂರು: ಕಾಲಿವುಡ್ ಖ್ಯಾತ ನಟ ಸೂರ್ಯ ಅವರು ಇಂದು ಅಪ್ಪು ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದರು.
ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟ ತಮಿಳಿನ ನಟ ಸೂರ್ಯ ಆತ್ಮೀಯ ಗೆಳೆಯ ಪುನೀತ್ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಿ ಎದುರು ನಿಂತು ಬಿಕ್ಕಿಬಿಕ್ಕಿ ಕಣ್ಣೀರು ಹಾಕಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಬಹಳ ಅನ್ಯಾಯ. ಈ ರೀತಿ ಆಗಬಾರದಿತ್ತು. ಏನು ಜರುಗಿದೆ ಅದನ್ನು ಈಗಲೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅಪ್ಪ ಅವರ ಫ್ಯಾಮಿಲಿ ಜೊತೆ ಕಳೆದಂತಹ ಬಹಳಷ್ಟು ಸಮಯಗಳು ಸದಾ ನೆನಪಾಗುತ್ತಿರುತ್ತದೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಅಪ್ಪ, ಅಮ್ಮನ ಯಾವುದೇ ಫೋಟೋ ಅಥವಾ ವೀಡಿಯೋ ನೋಡಿದರೂ ಇಬ್ಬರು ಸದಾ ನಗುತ್ತಲೇ ಇರುವುದನ್ನೇ ಕಾಣುತ್ತೇವೆ. ಇದನ್ನೂ ಓದಿ: ನನಗೆ ಅರ್ಥ ಮಾಡಿಕೊಳ್ಳಲು, ಈ ಸತ್ಯವನ್ನ ಅರಗಿಸಿಕೊಳ್ಳಲು ಆಗ್ತಿಲ್ಲ: ರಾಮ್ ಚರಣ್ ತೇಜಾ
ಸಮಾಜಕ್ಕೆ ಪುನೀತ್ ಅದ್ಭುತವಾದಂತಹ ಕೆಲಸಗಳನ್ನೇ ಮಾಡಿದ್ದಾರೆ. ಯಾರು ಪುನೀತ್ರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಅವರ ನೆನಪುಗಳನ್ನು ಸದಾ ಮನದಲ್ಲಿಟ್ಟುಕೊಂಡಿರುತ್ತಾರೆ. ಅಪ್ಪು ಯಾವಾಗಲೂ ನಮ್ಮ ಹೃದಯದಲ್ಲಿ ನಗುತ್ತಲೇ ಇರುತ್ತಾರೆ. ನಾನು ಪುನೀತ್ರನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ. ದೇವರು ಅವರ ಪತ್ನಿ, ಮಕ್ಕಳು ಮತ್ತು ಕುಟುಂಬಕ್ಕೆ ದುಃಖವನ್ನು ಸಹಿಸಿಕೊಳ್ಳುವ ಶಕ್ತಿ ನೀಡಲಿ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ಹೇಳಿದರು. ಇದೇ ವೇಳೆ ಸೂರ್ಯ ಅವರಿಗೆ ಶಿವರಾಜ್ ಕುಮಾರ್ ಸಾಥ್ ನೀಡಿದರು. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ