– ಸಿಎಂ ಹೇಳಿಕೆಯಿಂದಲೇ ಚಿಗುರಿಕೊಂಡ್ರಾ..?
ಬೆಂಗಳೂರು: ರಾಜ್ಯದಲ್ಲಿ ಪುಂಡ-ಪೋಕರಿಗಳಿಗೆ ಪೊಲೀಸರು, ಕಾನೂನಿನ ಭಯವೇ ಇಲ್ಲದಂತಾಗಿದೆ. 1 ತಿಂಗಳ ಅವಧಿಯಲ್ಲಿ 6 ನೈತಿಕ ಪೊಲೀಸ್ಗಿರಿ ಪ್ರಕರಣಗಳು ವರದಿಯಾಗಿದೆ. ಮಂಗಳೂರು, ಮೂಡಬಿದ್ರೆ, ಮಂಡ್ಯ, ಬೆಂಗಳೂರು ಬಳಿಕ ಈಗ ಬೆಳಗಾವಿ ಸರದಿಯಾಗಿದೆ.
ಇಂದು ತುಮಕೂರು ನಗರದ ಗುಬ್ಬಿ ಗೇಟ್ನಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಮಂಜು ಭಾರ್ಗವ ಎಂಬವರ ಮೇಲೆ ಅನ್ಯಕೋಮಿನ ಯುವಕರು ಹಲ್ಲೆ ಮಾಡಿದ್ದಾರೆ. ಕಾರು ಅಡ್ಡ ಹಾಕಿ ಜೊತೆಗೆಯಲ್ಲಿದ್ದ ಮತ್ತೊಬ್ಬ ಕಾರ್ಯಕರ್ತ ಕಿರಣ್ ಅನ್ನೋವ್ರ ಮೇಲೂ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿರುವ ಮಂಜುಭಾರ್ಗವ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ವ್ಹೀಲಿಂಗ್ ಮಾಡುತ್ತಾ ಕಾರಿಗೆ ಅಡ್ಡ ಬಂದಿದ್ದ ಮೂವರು ಯುವಕರು. ಇದನ್ನು ಪ್ರಶ್ನಿಸಿದ್ದಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಅಂತ ಶಾಸಕ ಜ್ಯೋತಿ ಗಣೇಶ್ ಹೇಳಿದ್ದಾರೆ.
ಅಕ್ಟೋಬರ್ 14ರಂದು ಅನ್ಯಕೋಮಿನ ಯುವತಿಯರೊಂದಿಗೆ ಮಾತಾಡ್ತಿದ್ದ ಯುವಕನ ಮೇಲೆ ಪುಂಡರು ಹಲ್ಲೆಗೆ ಯತ್ನಿಸಿದ ಘಟನೆ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. `ನಿನ್ನ ಹೆಸರೇನು, ಅಡ್ರೆಸ್ ಏನೂ’ ಅಂತ ಯುವತಿಯರಿಗೆ ಅವಾಜ್ ಹಾಕಿದ್ದಾರೆ. ಅಕ್ಟೋಬರ್ 14ರಂದು ರಾಯಭಾಗದ ಯುವಕ ಮತ್ತು ಸಂಕೇಶ್ವರದ ಯುವತಿ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿದ್ದ ಆಟೋ ಚಾಲಕನಲ್ಲಿ ಉದ್ಯಾನವನಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಬಳಿಕ ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ. ಯುವತಿ ದೂರಿನ ಮೇರೆಗೆ ನಾಲ್ವರನ್ನು ಬಂಧಿಸಿರೋದು ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಿಲ್ಲದ ಪುಂಡರ ಕುಚೇಷ್ಟೆ – ಕಾರಿನಲ್ಲಿ ಹೋಗ್ತಿದ್ದ ದಂಪತಿಗೆ ಅಡ್ಡಗಟ್ಟಿ ಧಮ್ಕಿ
ಇಷ್ಟೆಲ್ಲ ನೈತಿಕ ಪೊಲೀಸ್ಗಿರಿ ಘಟನೆಗಳು ನಡೀತಿದ್ರೂ ಪೊಲೀಸರೂ ಪುಂಡರನ್ನು ಬಂಧಿಸದೇ ರಾಜೀ ಸಂಧಾನ ಮಾಡಿ ಕಳಿಸ್ತಿದ್ದಾರೆ. ಮಂಗಳೂರಲ್ಲಿ ಅಕ್ಟೋಬರ್ 13ರಂದು ಸಿಎಂ ಮಾತನಾಡಿ, ಸಮಾಜದಲ್ಲಿ ಎಲ್ಲಾ ಧರ್ಮದವರು ಇದ್ದಾರೆ. ಭಾವನೆಗಳಿಗೆ ಧಕ್ಕೆ ಬಾರದ ರೀತಿ ನಡೆದುಕೊಳ್ಳಬೇಕು. ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ – ಪ್ರತಿಕ್ರಿಯೆ ಆಗುತ್ತೆ. ನೈತಿಕತೆ ಇಲ್ಲದೆ ಸಮಾಜದಲ್ಲಿ ಬದುಕೋಕೆ ಆಗಲ್ಲ ಅಂತ ಸಿಎಂ ಸಮರ್ಥಿಸಿಕೊಂಡಿದ್ದರು.
ಇದು ಪುಂಡರಿಗೆ ರೆಕ್ಕೆ-ಪುಕ್ಕ ಬಲಿಯುವಂತಾಗಿದೆ. ಇತ್ತ ಗೃಹ ಸಚಿವ ಆರಗ ಜ್ಞಾನೇಂದ್ರ ಹಳೇ ಡೈಲಾಗ್ ರಿಪೀಟ್ ಮಾಡಿದ್ದಾರೆ. ಈ ರೀತಿಯ ಪ್ರಕರಣಗಳನ್ನ ಸಹಿಸೋದಿಲ್ಲ. ಎಲ್ಲಾ ಘಟನೆಗಳಲ್ಲೂ ಪೋಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ಇದ್ರಲ್ಲಿ ಧರ್ಮದ ಪ್ರಶ್ನೆ ಬರಲ್ಲ. ಕೆಲವರು ಮಾನಸಿಕವಾಗಿ ಹೀಗೆ ಇರ್ತಾರೆ ಅಂತ ಹಾರಿಕೆ ಉತ್ತರ ಕೊಟ್ಟರು.