ಬೆಳಗಾವಿ: ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕೊಲೆ ಆರೋಪ ಪ್ರಕರಣದಲ್ಲಿ ಯುವತಿ ತಂದೆ, ತಾಯಿ ಸೇರಿ ಒಟ್ಟು 10 ಜನರ ಬಂಧನವಾಗಿದೆ.
ಬೆಳಗಾವಿ ಜಿಲ್ಲೆ ಖಾನಾಪುರ ಹೊರವಲಯದ ರೈಲ್ವೆ ಹಳಿಯ ಮೇಲೆ ಸೆ.28 ರಂದು ಅರ್ಬಾಜ್ ಮುಲ್ಲಾ ಎಂಬ ಯುವಕನ ಮೃತದೇಹ ಪತ್ತೆಯಾಗಿತ್ತು. ಕಳೆದ ಎರಡು ವರ್ಷದಿಂದ ಅರ್ಬಾಜ್ ಮುಲ್ಲಾ ಯುವತಿಯನ್ನ ಪ್ರೀತಿಸುತ್ತಿದ್ದ. ಈತ ವೆಹಿಕಲ್ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದ.
ಈತನ ಜೊತೆಗಿನ ಲವ್ ಕಹಾನಿ ಯುವತಿಯ ಕುಟುಂಬಕ್ಕೆ ಗೊತ್ತಾದ ಮೇಲೆ ಅರ್ಬಾಜ್ ಮುಲ್ಲಾ ಕೊಲೆಗೆ ಶ್ರೀ ರಾಮಸೇನೆ ಹಿಂದೂಸ್ತಾನ್ ಸಂಘಟನೆ ತಾಲೂಕು ಅಧ್ಯಕ್ಷ ಪುಂಡಲೀಕ್ ಮುತಗೇಕರಗೆ ಯುವತಿಯ ತಂದೆ-ತಾಯಿ ಸುಪಾರಿ ನೀಡಿದರು. ಇದನ್ನೂ ಓದಿ: ಮಧ್ಯರಾತ್ರಿ ಮಂಡ್ಯದಲ್ಲಿ ಪುಂಡರ ಅಟ್ಟಹಾಸ – ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ
ಇತ್ತ ಮೊದಲು ಅಸಹಜ ಸಾವು ಅಂತಾ ಪ್ರಕರಣ ದಾಖಲಿಸಿಕೊಂಡಿದ್ದ ಬೆಳಗಾವಿ ರೈಲ್ವೆ ಪೊಲೀಸರು ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ರು. ಮರಣೋತ್ತರ ಪರೀಕ್ಷೆ ವೇಳೆ ಅರ್ಬಾಜ್ ಮುಲ್ಲಾ ಕೊಲೆಯಾಗಿದ್ದು ದೃಢಪಟ್ಟಿತ್ತು. ನಂತರ ಬೆಳಗಾವಿ ಜಿಲ್ಲೆ ಖಾನಾಪುರ ಪೊಲೀಸರಿಗೆ ಪ್ರಕರಣ ವರ್ಗಾವಣೆಯಾಗಿತ್ತು. ಪ್ರಕರಣದ ಗಂಭೀರತೆ ಅರಿತ ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಆರೋಪಿಗಳ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.
ಪ್ರಕರಣದ ಆರೋಪಿ ಪುಂಡಲೀಕ್ ಮುತಗೇಕರಗೆ ವಿಚಾರಣೆ ವೇಳೆ ಪ್ರಕರಣ ಬಯಲಾಗಿದೆ. ಈ ಪ್ರಕರಣದ ಕುರಿತು ಯುವತಿ ತಂದೆ ಈರಪ್ಪ ಕಂಬಾರ, ತಾಯಿ ಸುಶಿಲ್ಲಾ ಕಂಬಾರ, ಕುತುಬುದ್ದೀನ್ ಬೇಪಾರಿ, ಪ್ರಹಲಾದ ಸುಗತೆ, ಮಂಜುನಾಥ್ ಗೊಂದಳ್ಳಿ, ಗಣಪತಿ ಸುಗತೆ, ಪ್ರಶಾಂತ್ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಸೇರಿ ಒಟ್ಟು 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.