ಮಂಗಳೂರು: ರಾಜ್ಯದ ವಿವಿಧಡೆಗೆ ಸರಬರಾಜು ಮಾಡಲು ಅರಬ್ ದೇಶದಿಂದ 190 ಮೆಟ್ರಿಕ್ ಟನ್ ಆಕ್ಸಿಜನ್ ಇಂದು ಮಂಗಳೂರಿಗೆ ಆಗಮಿಸಿದೆ.
ಅರಬ್ ದೇಶಗಳಾದ ಕುವೈಟ್ ಹಾಗೂ ಫುಜೈರ ದೇಶದಿಂದ 190 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ತಂದ INS ಶಾರ್ದೂಲ ಎಂಬ ಯುದ್ಧ ನೌಕೆ ಇಂದು ಮಂಗಳೂರಿನ ನವಮಂಗಳೂರು ಬಂದರು ತಲುಪಿದೆ. ಭಾರತ ದೇಶದ ಆಕ್ಸಿಜನ್ ಸಮಸ್ಯೆ ನೀಗಿಸಲು ಅರಬ್ ದೇಶಗಳೂ ಕೈ ಜೋಡಿಸಿದ್ದು ಈ ಹಿಂದೆಯೂ ಇದೇ ರೀತಿ ಆಕ್ಸಿಜನ್ ಕಳುಹಿಸಿಕೊಟ್ಟಿದೆ.
ಈ ಆಕ್ಸಿಜನ್ ನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅಗತ್ಯಕ್ಕನುಸಾರವಾಗಿ ಸರಬರಾಜು ಮಾಡಲಾಗುವುದು. ಇದರ ಉಸ್ತುವಾರಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ನೋಡಿಕೊಳ್ಳಲಿದೆ. ಆಕ್ಸಿಜನ್ ಆಗಮಿಸಿದ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಕೋಸ್ಟ್ ಗಾರ್ಡ್ ಕಮಾಂಡರ್ ವೆಂಕಟೇಶ್, ರೆಡ್ ಕ್ರಾಸ್ ನ ಮುಖಂಡರು ಸೇರಿದಂತೆ ಹಲವು ಅಧಿಕಾರಿಗಳು ಜೊತೆಗಿದ್ದರು.