ಲಾಕ್‍ಡೌನ್ ಬೇಡ, ಸಮಸ್ಯೆಗೆ ಅದೇ ಪರಿಹಾರವಲ್ಲ: ಅಶ್ವಥ್ ನಾರಾಯಣ್

Public TV
3 Min Read
ashwathnarayan 5

– ರೋಗ ಲಕ್ಷಣಗಳಿದ್ದರೆ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ
– ತಪ್ಪದೇ ಲಸಿಕೆ ಹಾಕಿಸಿಕೊಳ್ಳಿ ಅಂತ ಮನವಿ

ಬೆಂಗಳೂರು: ಮತ್ತೆ ಲಾಕ್‍ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಈಗಿನ ಸಂದರ್ಭಕ್ಕೆ ಅದು ಸರಿ ಹೊಂದುವುದೂ ಇಲ್ಲ. ಹೊರಗಿನಿಂದ ಬೆಂಗಳೂರಿಗೆ ಬರುತ್ತಿರುವ ಪ್ರತಿಯೊಬ್ಬರೂ ಕೋವಿಡ್ ತಪಾಸಣೆಗೆ ಒಳಗಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಹೇಳಿದರು.

SMG 1 lockdown

ಬೆಂಗಳೂರಿನಲ್ಲಿ ಬುಧವಾರ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ ಲಾಕ್‍ಡೌನ್ ಬೇಡ ಅಂತಲೇ ಹೇಳುತ್ತೇನೆ. ಸಮಾಜದಲ್ಲಿ ಯಾರೊಬ್ಬರಿಗೂ ಲಾಕ್‍ಡೌನ್ ತಡೆದುಕೊಳ್ಳುವ ಶಕ್ತಿ ಇಲ್ಲ. ಜೀವ ಉಳಿಯುವುದರ ಜೊತೆಗೆ ಜೀವನವೂ ನಡೆಯಬೇಕು. ಕಳೆದ ಒಂದು ವರ್ಷದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಮತ್ತೆ ಸಂಕಷ್ಟಕ್ಕೆ ಸಿಲುಕುವುದು ಬೇಡ ಎಂದರು.

ಎಲ್ಲ ಕಡೆ ಕೋವಿಡ್ ಉಚಿತ ತಪಾಸಣೆ ನಡೆಯುತ್ತಿದೆ. ಒಂದು ನಯಾಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ. ಹೊರಗಿನಿಂದ ನಗರಕ್ಕೆ ಯಾರಾದರೂ ಬಂದರೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾರೂ ಉಪೇಕ್ಷೆ ಮಾಡಬಾರದು. ಕೋವಿಡ್ ಲಕ್ಷಣಗಳೇನಾದರೂ ಕಂಡು ಬಂದರೆ ಅದನ್ನು ಕಡೆಗಣಿಸೋದು ಬೇಡ ಎಂದು ಅವರು ತಿಳಿಸಿದರು.

yediyurappa corona 1 1

ಕೋವಿಡ್ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುವ ಬದಲು ಸಂಕಷ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಡಿಸಿಎಂ ಕಿವಿಮಾತು ಹೇಳಿದರಲ್ಲದೆ, ಜನರು ಕೂಡ ಕಟ್ಟುನಿಟ್ಟಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಆ ಬಗ್ಗೆ ಅಸಡ್ಡೆ ತೋರಿಸುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.

ಯಾರೂ ಸೂಪರ್‍ಮ್ಯಾನ್ ಅಲ್ಲ: ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿ ಕೇಂದ್ರಗಳು ಸೇರಿದಂತೆ ಎಲ್ಲ ಕಡೆ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ”ನನಗೇನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ. ಗಟ್ಟಿಮುಟ್ಟಾಗಿದ್ದೇನೆ ಎಂಬ ಅತಿ ಆತ್ಮವಿಶ್ವಾಸ ಯಾರಿಗೂ ಬೇಡ. ಯಾರೂ ಕೂಡ ಸೂಪರ್‍ಮ್ಯಾನ್ ಅಲ್ಲ. ಇದನ್ನು ಎಲ್ಲರೂ ನೆನಪಲ್ಲಿ ಇಟ್ಟುಕೊಳ್ಳಬೇಕು. ಉಚಿತವಾಗಿ ಸಿಗುತ್ತಿರುವ ಸೌಲಭ್ಯಗಳನ್ನು ಎಲ್ಲರೂ ಬಳಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

ತಪಾಸಣಾ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದೆ. ಆ ಕೇಂದ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ದಿನಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಉಚಿತವಾಗಿ ಟೆಸ್ಟ್ ಮಾಡಲಾಗುತ್ತಿದೆ. ಯಾರಿಗೇ ಲಕ್ಷಣಗಳು ಇದ್ದರೆ ಅಂಥವರೆಲ್ಲ ತಕ್ಷಣ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು. ಔಷಧ ಇದೆ, ಲಸಿಕೆಯೂ ಲಭ್ಯವಿದೆ. ಆಸ್ಪತ್ರೆಯಷ್ಟೇ ಅಲ್ಲದೆ ಮನೆಯಲ್ಲೂ ಹೋಮ್ ಐಸೋಲೇಷನ್ ಆಗಿ ಚಿಕಿತ್ಸೆ ಪಡೆಯಬಹುದು ಎಂದು ಡಿಸಿಎಂ ತಿಳಿಸಿದರು.

kumar swamy

ಲಸಿಕೆ ಅಭಿಯಾನ ಉತ್ತಮ: ಲಸಿಕೆ ತಯಾರಿಕೆ ಹಾಗೂ ಲಸಿಕೆ ಅಭಿಯಾನವು ಇಡೀ ಜಗತ್ತಿನಲ್ಲಿಯೇ ನಮ್ಮ ದೇಶದಲ್ಲಿ ಉತ್ತಮವಾಗಿ ನಡೆಯುತ್ತಿದೆ. ಹೆಚ್ಚು ಜನರಿಗೆ ಕ್ಷಿಪ್ರವಾಗಿ ವ್ಯಾಕ್ಷಿನ್ ಕೊಟ್ಟಿರುವ ಏಕೈಕ ದೇಶ ನಮ್ಮದು. ಕೋವಿಡ್ ಎರಡನೇ ಅಲೆಯ ಅಪಾಯದ ತೀವ್ರತೆ ಕಡಿಮೆ. ಆದರೆ, ವೇಗವಾಗಿ ಹರಡುತ್ತಿದೆ. ಯುವಜನರು, ಮಧ್ಯವಯಸ್ಕರಿಗೆ ಹೆಚ್ಚು ಅಪಾಯ ಕಾಣುತ್ತಿದೆ. ಕೆಲವರು ರೋಗ ಲಕ್ಷಣಗಳಿದ್ದರೂ ಸೂಕ್ತ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿಲ್ಲ. ಇವರಿಂದಲೇ ಹೆಚ್ಚು ಸಮಸ್ಯೆಯಾಗುತ್ತಿದೆ. ಕೋವಿಡ್ ಟೆಸ್ಟ್ ನೆಗೆಟೀವ್ ಬಂದರೂ ಯಾರೂ ಎಚ್ಚರ ತಪ್ಪಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ಲಸಿಕೆ ಕೊರತೆ ಇಲ್ಲ: ಕೋವಿಡ್ ಲಸಿಕೆಯನ್ನು ರಫ್ತು ಮಾಡಿದ್ದರಿಂದಲೇ ದೇಶದಲ್ಲಿ ಕೊರತೆ ಉಂಟಾಗಲು ಕಾರಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಡಿರುವ ಆರೋಪವನ್ನು ಅಶ್ವಥ್ ನಾರಾಯಣ್ ತಳ್ಳಿಹಾಕಿದ್ದು, ಕುಮಾರಸ್ವಾಮಿ ಅವರು ಸರಿಯಾದ ಮಾಹಿತಿ ಇಲ್ಲದೆ ಆಧಾರ ರಹಿತ ಆರೋಪ ಮಾಡಿದ್ದಾರೆ. ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ. ಸಕಾಲಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಗ್ಧ ಜನರಿಗೆ ತಪ್ಪು ಮಾಹಿತಿ ಕೊಟ್ಟು ದಾರಿ ತಪ್ಪಿಸೋದು ಬೇಡ. ದೊಡ್ಡ ಸ್ಥಾನದಲ್ಲಿದ್ದವರು, ರಾಜ್ಯದ ಜವಾಬ್ದಾರಿ ಹೊತ್ತಿದ್ದವರು ಇಂಥ ಹೇಳಿಕೆಗಳನ್ನು ಕೊಡುವುದು ಸರಿಯಲ್ಲ ಎಂದರು.

DK SHIVAKUMAR

ಕೋವಿಡ್ ವಿಷಯದಲ್ಲಿ ಸರ್ಕಾರ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಕೆಲಸ ಮಾಡುತ್ತಿದೆ. ಇಂಥ ಸಂಕಷ್ಟದ ಸಮಯದಲ್ಲಿ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಾಲ ಕಾಲಕ್ಕೆ ಅವರ ಸಲಹೆಗಳನ್ನು ಪಡೆದಿದ್ದಾರೆ. ಆದರೆ ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಡಿರುವ ಆರೋಪ ಸುಳ್ಳು. ಅವರು ಪೂರ್ವಗ್ರಹಪೀಡಿತರಾಗಿ ದೂರುತ್ತಿದ್ದಾರೆ. ಪ್ರತಿಯೊಂದರಲ್ಲೂ ತಪ್ಪು ಹುಡುಕುವ ಅವರು, ಸಮಸ್ಯೆಗೆ ಪರಿಹಾರ ಹೇಳುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *