ಬೆಂಗಳೂರು: ಕರ್ನಾಟಕ ಬಂದ್ ನಡೆದ ಮೂರು ದಿನ ಬಳಿಕ ಮತ್ತೆ ರಾಜ್ಯದಲ್ಲಿ ಬಂದ್ ನಡೆಯಲಿದೆ. ಭಾರತ್ ಬಂದ್ ಹಿನ್ನೆಲೆಯಲ್ಲಿ ಡಿಸೆಂಬರ್ 8 ರಂದು ಕರ್ನಾಟಕ ಬಂದ್ ನಡೆಸುತ್ತಿರುವುದಾಗಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿಯ ರೈತರ ಚಳುವಳಿಯನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿತು. ಸರ್ಕಾರ ಕೇವಲ ಬೇಜವಾಬ್ದಾರಿಯಾಗಿ ಮಾತನಾಡುತ್ತಿದೆ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡಿದ್ದರಿಂದ ಇದೇ 8 ರಂದು ಭಾರತ ಬಂದ್ಗೆ ಕರೆ ನೀಡಲಾಗಿದ್ದು ಕರ್ನಾಟಕ ಬಂದ್ ನಡೆಯಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದರು.
ಭಾರತ ಬಂದ್ ದಿನ ಎಲ್ಲಾ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡುತ್ತೇವೆ. ಬಂದ್ಗೆ ಎಡಪಕ್ಷದವರು, ಪುಟ್ಟಣ್ಣಯ್ಯನವರ ರೈತ ಸಂಘಟನೆ, ಕುರುಬೂರು ಶಾಂತಕುಮಾರ್ ಸಂಘಟನೆಯವರು ಭಾಗವಹಿಸುತ್ತಾರೆ. ಅನೇಕ ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಭಾಗವಹಿಸಲಿವೆ ಎಂದು ಹೇಳಿದರು.
ಬಂದ್ ದಿನ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ಹೆದ್ದಾರಿ, ಗಡಿಗಳನ್ನು ಬಂದ್ ಮಾಡಲಾಗುವುದು. ಯಡಿಯೂರಪ್ಪನವರು ನಮ್ಮ ಬಂದ್ ಹತ್ತಿಕ್ಕುವ ಕೆಲಸ ಮಾಡಬಾರದು ಎಂದರು. ಈ ಬಂದ್ಗೆ ಎಲ್ಲ ಸಂಘಟನೆಗಳು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ಹೊಸ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಡಿಸೆಂಬರ್ 8 ರಂದು ರೈತರು ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಈ ಬಂದ್ಗೆ ಎಡಪಕ್ಷಗಳ ಬೆಂಬಲ ನೀಡಿವೆ.
ಭಾರತೀಯ ಕಮ್ಯುನಿಷ್ಟ್ ಪಕ್ಷ(ಸಿಪಿಐ), ಭಾರತೀಯ ಕಮ್ಯುನಿಷ್ಟ್ ಪಕ್ಷ –ಮಾರ್ಕ್ಸ್ ವಾದಿ(ಸಿಪಿಎಂ), ಸಿಪಿಐ(ಎಂಎಲ್), ಫಾರ್ವರ್ಡ್ ಬ್ಲಾಕ್ ಮತ್ತು ಅಖಿಲ ಭಾರತ ಸಮಾಜವಾದಿ ಪಕ್ಷ ಬಂದ್ ಬೆಂಬಲಿಸುವುದಾಗಿ ತಿಳಿಸಿದೆ.