‘ಮಾಸ್ಕ್ ಹಾಕಲ್ಲ, ಮನೆ ಒಳಗೂ ಇರಲ್ಲ, ಏನ್‌ ಮಾಡ್ತೀರೋ ಮಾಡ್ಕೊಳ್ಳಿʼ – ಹೋಂ ಕ್ವಾರಂಟೈನ್‌ ವ್ಯಕ್ತಿಯಿಂದ ಕಿರಿಕ್‌

Public TV
2 Min Read
bengaluru home qurantine corona

ಬೆಂಗಳೂರು: ಕೋವಿಡ್‌ 19 ನಿಯಮ ಉಲ್ಲಂಘನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹೋಮ್‌ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದಾನೆ.

ಕೆಂಗೇರಿಯ ಅಪಾರ್ಟ್‌ಮೆಂಟ್‌ನಲ್ಲಿದ್ದ ನಿವಾಸಿಗೆ ಕೋವಿಡ್‌ 19 ಪಾಸಿಟಿವ್‌ ಬಂದಿತ್ತು. ಆ  ನಿವಾಸಿಯನ್ನು ಕೋವಿಡ್‌ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಜೊತೆಗಿದ್ದ ವ್ಯಕ್ತಿಯನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿತ್ತು.

Corona Virus quarantine

ಆತನ ಮನೆಗೆ ಬಿಬಿಎಂಪಿ ಸಿಬ್ಬಂದಿ ಬಂದು ಕ್ವಾರಂಟೈನ್‌ ನೋಟಿಸ್‌ ಅಂಟಿಸಿ ಹೋಗಿದ್ದರು. ಆದರೆ ಕ್ವಾರಂಟೈನ್‌ನಲ್ಲಿದ್ದ ಈ ವ್ಯಕ್ತಿ ಎಂದಿನಂತೆ ವಾಕಿಂಗ್ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಮಾಸ್ಕ್ ಧರಿಸದೇ ಅಪಾರ್ಟ್ ಮೆಂಟ್ ತುಂಬಾ ಓಡಾಟ ಮಾಡಿದ್ದಾನೆ.

ಓಡಾಟ ಮಾಡುವುದನ್ನು ಕಂಡು ನಿವಾಸಿಗಳು ಆತನನ್ನು ಪ್ರಶ್ನಿಸಿದ್ದಕ್ಕೆ, “ನಾನ್ ಮಾಸ್ಕ್ ಹಾಕಲ್ಲ. ಮನೆ ಒಳಗೂ ಇರಲ್ಲ, ಅದೇನ್ ಮಾಡ್ಕೋತಿರೋ ಮಾಡ್ಕೊಳ್ಳಿ” ಎಂದು ಕಿರಿಕ್‌ ಮಾಡಿದ್ದಾನೆ. ಅಷ್ಟೇ ಅಲ್ಲದೇ “ಬೇಕಾದ್ರೆ ಪೊಲೀಸರಿಗೆ ದೂರು ನೀಡಿ. ನಾನು ಹಿಂಗೆ ಇರ್ತೀನಿ” ಎಂದಿದ್ದಾನೆ. ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿರುವ ವೇಳೆ ನಿವಾಸಿಯೊಬ್ಬರು ವಿಡಿಯೋ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

home quarantine 1584463060642

1.51 ಲಕ್ಷ ಮಂದಿಯಿಂದ ಉಲ್ಲಂಘನೆ
ಸಿಲಿಕಾನ್‌ ಸಿಟಿಯಲ್ಲಿ ಕೊರೊನಾ ರಾಕೆಟ್‌ ವೇಗದಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ಕ್ವಾರಂಟೈನ್‌ಗಳು ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ. ಇಲ್ಲಿಯವರೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 1.51 ಲಕ್ಷ ಮಂದಿ ಕ್ವಾರಂಟೈನ್‌ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕೋವಿಡ್‌ 19 ಸೋಂಕಿತರ ಪ್ರಥಮ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ ಕರ್ನಾಟಕದಲ್ಲಿ 2.25 ಲಕ್ಷ ಮಂದಿ ಈ ನಿಯಮವನ್ನು ಉಲ್ಲಂಘಿಸಿ ಸುತ್ತಾಟ ಮಾಡಿದ್ದಾರೆ.

home quarantine india stamp corona 1

ಈ ಪೈಕಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 1.51 ಲಕ್ಷ ಮಂದಿ ಸುತ್ತಾಟ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದವರಿಗೆ ಸರ್ಕಾರ ಎಚ್ಚರಿಕೆ ನೀಡಿದೆ. ಈಗಾಗಲೇ 1,645 ಮಂದಿಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಹೋಮ್‌ ಕ್ವಾರಂಟೈನ್‌ ಉಲ್ಲಂಘಿಸಿದ 2,205 ಮಂದಿಯನ್ನ ಸಾಂಸ್ಥಿಕ ಕ್ವಾರಂಟೈನ್‌ ಒಳಪಡಿಸಲಾಗಿದೆ.

ಕ್ವಾರಂಟೈನಿಗಳ ಕೈಗೆ ಸೀಲ್, ಮನೆಗೆ ಭಿತ್ತಿಪತ್ರ ಅಂಟಿಸಲಾಗುತ್ತದೆ. ಅವರ ಚಟುವಟಿಕೆ, ಚಲನವಲನಗಳ ಮೇಲೆ ಅಕ್ಕಪಕ್ಕದವರು ನಿಗಾ ಇಡಬೇಕು. ಅವರು ಮನೆಯಿಂದ ಹೊರಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು. ಆಗ ಮಾತ್ರ ಕೊರೊನಾ ಹಬ್ಬುವುದನ್ನು ತಪ್ಪಿಸಬಹುದು. ಹೋಮ್‌ ಕ್ವಾರಂಟೈನ್‌ ನಿಯಮವನ್ನು ಪದೇ ಪದೇ ಉಲ್ಲಂಘಿಸಿ ಸ್ಥಳೀಯರು ದೂರು ನೀಡಿದರೆ ಸ್ಥಳಕ್ಕೆ ಪೊಲೀಸರು ಬಂದು ವ್ಯಕ್ತಿಯನ್ನು ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *