ಬಾಗಲಕೋಟೆ: ಕೊರೊನಾ ಭಾರತದೆಲ್ಲೆಡೆ ರುದ್ರತಾಂಡವ ಶುರುವಿಟ್ಟಿದೆ. ಕರ್ನಾಟಕದಲ್ಲೂ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಕೋಟೆನಾಡಿನ ಜಿಲ್ಲೆ ಬಾಗಲಕೋಟೆಗೂ ಮಹಾಮಾರಿ ಕಾಲಿಟ್ಟು, ಈಗಾಗಲೇ ಓರ್ವ ವ್ಯಕ್ತಿಯನ್ನು ಬಲಿ ಪಡೆದಿದೆ. ಜಿಲ್ಲೆಯಲ್ಲಿ ಕೊರೊನಾ ಪಸರಿಸುತ್ತಲೇ ಕಾಲಿಟ್ಟ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಬಾಗಲಕೋಟೆ ಜಿಲ್ಲೆಗೆ ವೈರಸ್ ಹೇಗೆ ಬಂತು ಅನ್ನೋದು ಮಾತ್ರ ಗೊತ್ತಾಗುತ್ತಿಲ್ಲ. ಹೀಗಾಗಿ ಜಿಲ್ಲಾಡಳಿತ ಫುಲ್ ತಲೆ ಕೆಡಿಸಿಕೊಂಡಿದೆ.
ಮೃತ ವೃದ್ಧನ ಕೊರೊನಾ ಮೂಲ ಪತ್ತೆ ಹಚ್ಚುವ ಸಲುವಾಗಿ ಬಾಗಲಕೋಟೆ ಜಿಲ್ಲಾಡಳಿತ ಆತನ ಮನೆ, ಅಂಗಡಿ ವ್ಯಾಪ್ತಿಯ 12 ಸಾವಿರ ಜನರ ಆರೋಗ್ಯ ಸಮೀಕ್ಷೆ, ಆರೋಗ್ಯ ತಪಾಸಣೆ ಮಾಡಿದೆ. 12 ಸಾವಿರ ಜನರಲ್ಲಿ ಮತ್ತೊಂದು ಹಂತದಲ್ಲಿ ಸಮೀಕ್ಷೆ ಮಾಡಲಾಗುತ್ತಿದೆ. 60 ವರ್ಷ ಮೇಲ್ಪಟ್ಟ ಮತ್ತು ಕೆಮ್ಮು, ನೆಗಡಿ ಜ್ವರದಿಂದ ಬಳಲುತ್ತಿರುವ ವೃದ್ಧರ ಸರ್ವೆ ಹಾಗೂ ಆರೋಗ್ಯ ತಪಾಸಣೆಯನ್ನು ಜಿಲ್ಲಾಡಳಿತ ನಡೆಸುತ್ತಿದೆ. ಅಲ್ಲದೇ ವೃದ್ಧನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ 23 ಜನರನ್ನು ಈಗಾಗಲೇ ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ನಲ್ಲಿ ಇರಿಸಲಾಗಿದೆ.
ವೃದ್ಧನ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದವರ ಏಳು ಜನರ ಪೈಕಿ ಇಬ್ಬರಲ್ಲಿ ಕೊರೊನಾ ಕಂಡುಬಂದಿದೆ. ಇನ್ನೂ ಐವರ ವರದಿ ಬರಬೇಕಿದೆ. ವೃದ್ಧನ ಮಗ ಮತ್ತು ಮಗಳ ಪ್ರವಾಸದ ಬಗ್ಗೆ ಜಿಲ್ಲಾಡಳಿತ ಮಾಹಿತಿ ಕಲೆ ಹಾಕಲಾಗುತ್ತಿದೆ.
ಬಾಗಲಕೋಟೆಯಲ್ಲಿ ಕೊರೊನಾಗೆ ವೃದ್ಧನ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಿಂದ ಜಿಲ್ಲೆಯಿಂದ ಸೋಂಕು ಬಂದಿರೋ ಸಂಶಯ ಇದೆ. ಕೊರೊನಾಗೆ ಮೃತಪಟ್ಟ ವೃದ್ದನ ಸಹೋದರ ಮಾರ್ಚ್ 15 ರಂದು ರೈಲಿನ ಮೂಲಕ ಕಲಬುರಗಿಗೆ ಹೋಗಿದ್ದರು. ಕಲಬುರಗಿಯ ಮೊಮಿನ್ಪುರ ಏರಿಯಾ, ಗಂಜ್ ಏರಿಯಾದಲ್ಲಿ ಓಡಾಡಿದ್ದರು. ಕಲಬುರಗಿಯಲ್ಲಿ ಕೊರೊನಾದಿಂದ ಮೃತಪಟ್ಟ ವ್ಯಕ್ತಿ ಮನೆ ಬಳಿ ಓಡಾಡಿದ್ರು. ಮಾರ್ಚ್ 16 ರಂದು ಬಸ್ ಮೂಲಕ ರಾತ್ರಿ 11.30ಕ್ಕೆ ಬಾಗಲಕೋಟೆಗೆ ವಾಪಸ್ ಆಗಿದ್ದರು. ಈ ಬಗ್ಗೆ ಜಿಲ್ಲಾಡಳಿತ ಕೂಲಂಕುಷ ತನಿಖೆ ನಡೆಸುತ್ತಿದೆ.