ಕೊಪ್ಪಳ: ಪಾಕಿಸ್ತಾನ ಜಿಂದಾಬಾದ್ ಎಂದು ದೇಶದ್ರೋಹದ ಘೋಷಣೆ ಕೂಗಿರುವ ಅಮೂಲ್ಯ ಲಿಯೋನಾ ಅವಳಿನ್ನೂ ಕಣ್ಣೇ ಬಿಟ್ಟಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಯಾರೋ ಹೇಳಿಕೊಟ್ಟಿದ್ದಾರೆ. ಅದನ್ನು ಅವಳು ಹೇಳಿದ್ದಾಳೆ. ಇದು ಬಯಲಾಗಲಿದೆ. ಇದರ ಹಿಂದೆ ಷಡ್ಯಂತ್ರ ಮಾಡುವವರ ವಿರುದ್ಧ ತನಿಖೆ ಆರಂಭವಾಗಿದ್ದು, ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕೆಲವರು ಇನ್ನೊಬ್ಬರನ್ನು ತೃಪ್ತಿಪಡಿಸಲು ಹೇಳುತ್ತಿರಬಹುದು. ಇಂತಹ ಹೇಳಿಕೆ ನೀಡುವವರು ಈ ದೇಶದಲ್ಲಿ ಇರಲು ಅರ್ಹತೆ ಕಳೆದುಕೊಂಡಿದ್ದು, ಈ ದೇಶದಲ್ಲಿರಲು ಅವರು ನಾಲಾಯಕ್ ಎಂದು ಕಿಡಿಕಾರಿದರು.
ಗೌರವಸ್ಥರು ಈ ದೇಶದ ಭಾವನೆ ಅರ್ಥ ಮಾಡಿಕೊಂಡವರು ಈ ರೀತಿ ಮಾತನಾಡೋದಿಲ್ಲ. ಇಂತಹ ಹೇಳಿಕೆ ನೀಡೋರು ಅಲ್ಲಿಯೇ ಹೋಗಲಿ. ಈ ದೇಶದ ಭಾವನೆ ಅರ್ಥ ಮಾಡಿಕೊಂಡು ಗೌರವದಿಂದ ಬದುಕಬೇಕು. ಇಲ್ಲದಿದ್ದರೆ ಜನ ಬಡಿಗೆ ತೆಗೆದುಕೊಳ್ತಾರೆ ಎಂದು ಎಚ್ಚರಿಸಿದರು. ಇದನ್ನೂ ಓದಿ: ಪಾಕಿಸ್ತಾನ ಜಿಂದಾಬಾದ್ ಎಂದ ದೇಶದ್ರೋಹಿ ಅಮೂಲ್ಯ ಲಿಯೋನಾ ಯಾರು?
ಇದೇ ವೇಳೆ ಅಮೂಲ್ಯ ಲಿಯೋನಾಳನ್ನು ಮಾತನಾಡಲು ಬಿಡಬೇಕಿತ್ತು ಎಂದು ಡಿಕೆಶಿ ಹೇಳಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಡಿ.ಕೆ ಶಿವಕುಮಾರ್ ಗಂಟೆಗೊಮ್ಮೆ ಬಣ್ಣ ಬದಲಾಯಿಸುತ್ತಾರೆ. ಡಿಕೆಶಿ ಮಾತನಾಡಿದ್ದು ಗೊತ್ತಿಲ್ಲ. ಯಾರೇ ಮಾತಾನಡಲಿ. ಇದು ತಪ್ಪು ಎಂದರು.
ಅಮೂಲ್ಯ ಲಿಯೋನಾ ಹೇಳಿದ್ದೇನು?
ಸಿಎಎ ಹಾಗೂ ಎನ್ಸಿಆರ್ ವಿರೋಧಿಸಿ ಗುರುವಾರ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ಆಯೋಜಿಸಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಆಸಾದುದ್ದೀನ್ ಓವೈಸಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲೇ ಚಿಕ್ಕಮಗಳೂರಿನ ಕೊಪ್ಪ ಮೂಲದ ಅಮೂಲ್ಯ ಲಿಯೋನಾ ಪಾಕಿಸ್ತಾನ ಜಿಂದಾಬಾದ್ ಎಂದು ಜೈಕಾರ ಕೂಗಿದ್ದು, ಸದ್ಯ ಜೈಲುಪಾಲಾಗಿದ್ದಾಳೆ. ಇದನ್ನೂ ಓದಿ: ನಂಗೆ ಚಿಕನ್ ಪಾಪ್ ಕಾರ್ನ್ ಬೇಕು, ಚಿತ್ರಾನ್ನ ಉಪ್ಪಿಟ್ಟು ಬೇಡ: ಅಮೂಲ್ಯ ಬೇಡಿಕೆ