ತುಮಕೂರು: ಮನೆಯ ನೀರಿನ ತೊಟ್ಟಿಯಲ್ಲಿ ಬಿದ್ದು ಮಗುವೊಂದು ಸಾವನ್ನಪ್ಪಿರುವ ಘಟನೆ ನಗರದ ಹನುಮಂತಪುರದಲ್ಲಿರುವ ರಾಘವೇಂದ್ರ ಮಠದ ಬಳಿ ನಡೆದಿದೆ.
ವಿಜಯೇಂದ್ರ ಕಾವ್ಯ ದಂಪತಿಯ ಮಗು ಆಘನಾ ಮೃತ ಬಾಲಕಿ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯ ಹೊರಗೆ ಆಟವಾಡುತ್ತಿದ್ದ ಆಘನಾ ಮನೆಯ ಮುಂಭಾಗದಲ್ಲಿದ್ದ ನೀರಿನ ತೊಟ್ಟಿಗೆ ಬಿದ್ದಿದೆ. ಮನೆಯ ಒಳಗೆ ಕೆಲಸ ಮಾಡುತ್ತಿದ್ದ ತಾಯಿ ಕಾವ್ಯ ಹೊರಗೆ ಬಂದು ನೋಡಿದಾಗ ವಿಷಯ ಬೆಳಕಿಗೆ ಬಂದಿದೆ. ಮಗು ನೀರಿನ ತೊಟ್ಟಿಯೊಳಗೆ ಬಿದ್ದಿರುವುದನ್ನು ನೋಡಿ ಗಾಬರಿಗೊಂಡ ತಾಯಿ ಅಕ್ಕಪಕ್ಕದವರನ್ನು ಕರೆದಿದ್ದಾರೆ.
ತಕ್ಷಣ ಸಹಾಯಕ್ಕೆ ಬಂದ ಸ್ಥಳೀಯರು ಮಗುವನ್ನು ನೀರಿನ ತೊಟ್ಟಿಯಿಂದ ತೆಗೆದು ದೇಹದಲ್ಲಿ ಸೇರಿದ್ದ ನೀರನ್ನು ಹೊರಗೆ ತೆಗೆಯಲು ಪ್ರಯತ್ನ ಮಾಡಿದ್ದಾರೆ. ಅಷ್ಟೊತ್ತಿಗಾಗಲೇ ಸಮಯ ಮೀರಿದ್ದರಿಂದ ಮಗು ಕೊನೆಯುಸಿರೆಳೆದಿತ್ತು.