ದಾವಣಗೆರೆ: ನನಗೂ ಡಿಸಿಎಂ ಆಗುವ ಆಸೆ ಇತ್ತು. ಆದರೆ ಮುಖ್ಯಮಂತ್ರಿ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮುಜುಗರ ತರುವ ಕೆಲಸ ಮಾಡೋಲ್ಲ ಎಂದು ನನಗೂ ಡಿಸಿಎಂ ಸ್ಥಾನದ ಮೇಲೆ ಆಸೆ ಇದೆ ಎನ್ನುವುದನ್ನು ಆರೋಗ್ಯ ಸಚಿವ ಶ್ರೀರಾಮುಲು ಹೊರಹಾಕಿದ್ದಾರೆ.
ದಾವಣಗೆರೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುವ ವಾಲ್ಮೀಕಿ ಜಾತ್ರೆಗೆ ಸಚಿವ ಶ್ರೀರಾಮುಲು ಅಧ್ಯಕ್ಷರಾಗಿದ್ದಾರೆ. ಮಠಕ್ಕೆ ಹೊರಡುವ ಸಂದರ್ಭದಲ್ಲಿ ದಾವಣಗೆರೆಯಲ್ಲಿ ಮಾತನಾಡಿದ ಅವರು, ಡಿಸಿಎಂ ಆಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ನವರು ವಾಲ್ಮೀಕಿ ಸಮಾಜಕ್ಕೆ ಅವಕಾಶ ಕೊಡುತ್ತಾರೆ. ಅಲ್ಲದೆ ಕೊಟ್ಟ ಮಾತನ್ನು ಯಡಿಯೂರಪ್ಪ ಯಾವತ್ತು ತಪ್ಪುವುದಿಲ್ಲ. ಈಗ ಸಿಎಂ ಸಾಕಷ್ಟು ಒತ್ತಡದಲ್ಲಿದ್ದಾರೆ. ಈಗ ಹೋಗಿ ಒತ್ತಡ ಹಾಕಿದ್ರೆ ಅವರಿಗೆ ಮುಜುಗರ ನೀಡಿದಂತಾಗುತ್ತದೆ.
ನಾಳೆ, ನಾಡಿದ್ದು ಬಜೆಟ್ ಪೂರ್ವ ಸಭೆ ಇದ್ದು, ನಮ್ಮ ಸಲಹಗೆಳನ್ನು ನಾವು ಸಿಎಂಗೆ ಕೊಡುತ್ತೇವೆ ಎಂದು ಶ್ರೀರಾಮುಲು ಹೇಳಿದರು. ಇದೇ ವೇಳೆ ಅವರಿಗೆ ಬಳ್ಳಾರಿ ಉಸ್ತುವಾರಿ ಸಚಿವ ಸ್ಥಾನದ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.
ಶನಿವಾರವಾದ್ದರಿಂದ ದಾವಣಗೆರೆಯ ಹೊರವಲಯದಲ್ಲಿರುವ ಶಾಮನೂರು ಗ್ರಾಮದ ಆಂಜನೇಯನ ದೇವಸ್ಥಾನಕ್ಕೆ ಶ್ರೀರಾಮುಲು ಭೇಟಿ ನೀಡಿದ್ದು, ಆಂಜನೇಯನಿಗೆ ಪೂಜೆ ಸಲ್ಲಿಸಿದರು. ಅಲ್ಲದೆ ಆಂಜನೇಯ ಹಾಗೂ ಈಶ್ವರನಿಗೆ ಪೂಜೆ ಸಲ್ಲಿಸಿ ದೇವಸ್ಥಾನದ ಪಕ್ಕದಲ್ಲೇ ಇದ್ದ ಹೋಟೆಲೊಂದರಲ್ಲಿ ಒಗ್ಗರಣೆ ಮಂಡಕ್ಕಿ ಹಾಗೂ ಮೆಣಸಿನಕಾಯಿ ತಿಂದು ಅಲ್ಲಿಂದ ವಾಲ್ಮೀಕಿ ಮಠಕ್ಕೆ ಪ್ರಯಾಣ ಬೆಳಸಿದರು. ಇನ್ನು ಸಚಿವ ಶ್ರೀರಾಮುಲು ಅವರನ್ನು ನೋಡುತ್ತಿದ್ದಂತೆ ಸಾಕಷ್ಟು ಜನರು ಅವರನ್ನು ನೋಡಲು ಮುಗಿಬಿದ್ದಿದ್ದರು.