ನೆಲಮಂಗಲ: ನಾಡಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಲೋಕ ಕಲ್ಯಾಣವಾಗಿ ಸುಭಿಕ್ಷೆಯಿಂದ ಇರಲೆಂದು ತಿರು ಶ್ರೀನಿವಾಸ ಕಲ್ಯಾಣೋತ್ಸವವನ್ನು ಶ್ರದ್ಧಾ ಭಕ್ತಿಗಳಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಆಚರಿಸಲಾಯಿತು.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ದಾಸನಪುರ ಗ್ರಾಮದ ಪುರಾತನ ಶ್ರೀದೇವಿ ಭೂದೇವಿ ಸಮೇತ ರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಬೆಳಗ್ಗೆಯಿಂದ ವಿವಿಧ ಹೋಮ-ಹವನಗಳ ಜೊತೆ ಕಲ್ಯಾಣ ಮಹೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಪುನೀತರಾದರು.
ನಾಡಿನಲ್ಲಿ ಈ ವರ್ಷ ಬರಗಾಲ ಹಾಗೂ ಭೀಕರ ಪ್ರವಾಹದಿಂದಾಗಿ ರಾಜ್ಯ ತತ್ತರಿಸಿದ್ದು, ಮುಂದೆ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮೇಲುಕೋಟೆಯ ಯತಿರಾಜ ಮಠದ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ನೇತೃತ್ವದಲ್ಲಿ ಕಲ್ಯಾಣ ಮಹೋತ್ಸವ ವಿಶೇಷ ರೀತಿಯಲ್ಲಿ ಜರುಗಿತು.
ಶ್ರೀದೇವಿ ಭೂದೇವಿ ಸಮೇತ ಶ್ರೀ ರಂಗನಾಥಸ್ವಾಮಿ ವಜ್ರ ಅಲಂಕಾರ ಸಮೇತ ವಿವಿಧ ಹೂಗಳಿಂದ ಅಲಂಕರಿಸಿ ತಿರುಪತಿಯ ತಿಮ್ಮಪ್ಪನಂತೆ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಲಾಜಹೋಮ, ಶಾಂತಿಹೋಮ, ಪೂರ್ಣಾಹುತಿ ನಂತರ ಗೋಧೂಳಿ ಲಗ್ನದಲ್ಲಿ ರಂಗನಾಥ ಸ್ವಾಮಿಯ ಉಯ್ಯಾಲೋತ್ಸವ ನಡೆಸಲಾಯಿತು ಎಂದು ದೇವಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಲಕ್ಷ್ಮಣಮೂರ್ತಿ ಹಾಗೂ ಅರ್ಚಕ ರಂಗಚಾರ್ ತಿಳಿಸಿದರು.