ನೆಲಮಂಗಲ: ಈ ವಾರವನ್ನು 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಘೋಷಿಸಿದೆ. ಆದರೂ ಹೆಲ್ಮೆಟ್ ಬಳಸದೆ ವಾಹನ ಸವಾರರ ಓಡಾಟ ಇನ್ನೂ ನಿಂತಿಲ್ಲ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ.ಡಿ.ಎಸ್ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.
ರಸ್ತೆ ಸುರಕ್ಷಾ ಸಪ್ತಾಹದ ಹಿನ್ನೆಲೆಯಲ್ಲಿ ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿಯ ಖಾಸಗಿ ಕಂಪನಿ ಸಹಯೋಗದೊಂದಿಗೆ ರಸ್ತೆ ಸಂಚಾರ ನಿಯಮ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ದ್ವಿಚಕ್ರ ವಾಹನ ಸವಾರರಿಗೆ ಹೆದ್ದಾರಿಯ ಅಪಘಾತಗಳ ಬಗ್ಗೆ ಮಾಹಿತಿ, ಅಪಘಾತಗಳಿಗೆ ಕಾರಣಗಳು ಹಾಗೂ ರಕ್ಷಣೆಯ ಉಪಾಯಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ತಿಳಿಸಿಕೊಡಲಾಯಿತು.
ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಖಾಸಗಿ ಕಂಪನಿ ಸಂಯುಕ್ತ ಆಶ್ರಯದಲ್ಲಿ ಈ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. ಹಿರಿಯ ಮೋಟಾರು ವಾಹನ ನಿರೀಕ್ಷಕ ಡಾ. ಡಿ.ಎಸ್ ಒಡೆಯರ್ ಮಾತನಾಡಿ, 21ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ನಡೆಸುತ್ತಿದ್ದರೂ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ರಸ್ತೆ ನಿಯಮದ ಅರಿವು ಎಲ್ಲರಿಗೂ ಅತ್ಯಗತ್ಯ. ಸವಾರರು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಓಡಿಸಬೇಕು ಎಂದು ತಿಳಿಸಿದರು.