ಬೆಂಗಳೂರು: ಉಪ ಚುನಾವಣೆ ಗೆಲುವು ಸಾಧಿಸಿದ 15 ಜನ ಶಾಸಕರು ಇಂದು ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮ್ಮುಖದಲ್ಲಿ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು. ಅಥಣಿ ಕ್ಷೇತ್ರ ಮಹೇಶ್ ಕುಮಟಳ್ಳಿ, ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್, ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ, ಯಲ್ಲಾಪುರ ಕ್ಷೇತ್ರದ ಶಿವರಾಮ್ ಹೆಬ್ಬಾರ್ ಅವರು ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್ ದೇವರ ಹೆಸರಲ್ಲಿ ಹಾಗೂ ಬಸವಣ್ಣನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಣೆಬೆನ್ನೂರು ಕ್ಷೇತ್ರದ ನೂತನ ಶಾಸಕರಾಗಿ ಅರುಣ್ ಕುಮಾರ್ ಮನೆ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ವಿಜಯನಗರ ಕ್ಷೇತ್ರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ.ಸುಧಾಕರ್, ಕೆ.ಆರ್.ಪುರಂ ಕ್ಷೇತ್ರದ ಬೈರತಿ ಬಸವರಾಜು, ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ನೂತನ ಶಾಸಕರಾಗಿ ಗೋಪಾಲಯ್ಯ, ಕೆ.ಆರ್.ಪೇಟೆ ನೂತನ ಶಾಸಕರಾಗಿ ಕೆ. ನಾರಾಯಣ ಗೌಡ, ಹೊಸಕೋಟೆ ಕ್ಷೇತ್ರದ ನೂತನ ಶಾಸಕರಾಗಿ ಶರತ್ ಬಚ್ಚೇಗೌಡ ಪ್ರಮಾಣ ವಚನ ಸ್ವೀಕರಿಸಿದರು.
ಶರತ್ ಬಚ್ಚೇಗೌಡ ಪ್ರಮಾಣವಚನ ಸ್ವೀಕಾರದ ವೇಳೆ ಹೆಚ್ಚು ಜೈಕಾರ ಮೊಳಗಿತು. ಇದಕ್ಕೂ ಮುನ್ನ ಶರತ್ ಬಚ್ಚೇಗೌಡ ಅವರು ಬ್ಯಾಂಕ್ವೆಟ್ ಹಾಲ್ ಪ್ರವೇಶಿಸುತ್ತಿದ್ದಂತೆ ಬೆಂಬಲಿಗರು ನೂತನ ಜೈಕಾರ ಕೂಗಿದರು. ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಸಚಿವರಾದ ಅಶೋಕ್, ಬಸವರಾಜ ಬೊಮ್ಮಾಯಿ, ಸುರೇಶ್ ಕುಮಾರ್, ನಾಗೇಶ್ ಉಪಸ್ಥಿತಿರಿದ್ದರು.