ದಾವಣಗೆರೆ: ಸಚಿವ ಈಶ್ವರಪ್ಪ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಮಹಿಳೆಯರಿಗೆ ತುರುಬು ಬಿಚ್ಚುವುದು ಗೊತ್ತು, ಕಟ್ಟುವುದು ಗೊತ್ತಿದೆ ಎಂದು ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ತಿರುಗೇಟು ನೀಡಿದ್ದಾರೆ.
ಈಶ್ವರಪ್ಪ ಕಾಂಗ್ರೆಸ್ನ್ನು ತುರುಬಿಗೆ ಹೋಲಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪನವರಿಗೆ ಸ್ವಾಭಿಮಾನ ಇದ್ದರೆ ಅವರ ಬೆನ್ನು ಅವರು ನೋಡಿಕೊಳ್ಳಲಿ. ಅವರ ಯೋಗ್ಯತೆ ಎಲ್ಲಿಗೆ ಬಂತು ಎನ್ನುವುದು ಗೊತ್ತಾಗುತ್ತೆ. ಉಪಮುಖ್ಯಮಂತ್ರಿಯಾದವರು ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಕೊಂಡಾಡಿದ ಪಿಟಿಪಿ, ರಾಜ್ಯದಲ್ಲೇ ದಾವಣಗೆರೆಯಷ್ಟು ಯಾರೂ ಅಭಿವೃದ್ಧಿ ಮಾಡಿಲ್ಲ. ಸಾಕಷ್ಟು ಅನುದಾನ ತೆಗೆದುಕೊಂಡು ಬಂದು ಅಭಿವೃದ್ಧಿ ಕೆಲಸ ಮಾಡಿದರು. ಆದರೆ ಮತದಾರರು ಅವರ ಕೈ ಹಿಡಿಯಲಿಲ್ಲ. ವಿರೋಧಿಗಳಿಗೆ ಠೇವಣೆ ಇಲ್ಲದಂತೆ ಮಾಡಿ ಹೆಚ್ಚಿನ ಮತಗಳಿಂದ ಗೆಲ್ಲಿಸಬೇಕಿತ್ತು. ಮತದಾರರು ಆ ರೀತಿ ಮಾಡಲಿಲ್ಲ. ಆದರೆ ಈ ಬಾರಿ ಪಾಲಿಕೆ ಚುನಾವಣೆಯಲ್ಲಿಯಾದರೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಅನರ್ಹ ಶಾಸಕರಿಗೆ ಹಾಗೂ ಬಿಜೆಪಿಗೆ ಸಂಬಂಧವಿಲ್ಲ ಎಂಬ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕುರಿತು ಮಾತನಾಡಿದ ಅವರು, ಬಿಜೆಪಿಯವರದ್ದು ಏಣಿ ಹತ್ತಿ ಅದನ್ನೇ ಒದೆಯುವ ಕೆಲಸ ಮಾಡುತ್ತಿದ್ದಾರೆ. ಮೊದಲಿನಿಂದಲೂ ಇದೇ ರೀತಿಯ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ಈಗ ಅವರ ಸ್ಥಿತಿ ಏನಾಗಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಅನೈತಿಕ ಸರ್ಕಾರ, ಬಿಜೆಪಿಯನ್ನು ನಂಬಬೇಡಿ ಎಂದು ಅನರ್ಹ ಶಾಸಕರಿಗೆ ಹೇಳಿದ್ದೆವು. ಈಗ ಅವರಿಗೆ ಜ್ಞಾನೋದಯವಾಗಿರಬೇಕು. ಅದಕ್ಕೆ ಸವದಿಯವರು ಈ ರೀತಿ ಹೇಳಿರಬೇಕು ಎಂದು ಟಾಂಗ್ ನೀಡಿದರು.