ಬೀದರ್: ಮಾಜಿ ಸಿಎಂ ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯ ಅವರೇ ಹೊರತು, ಅವರಿಗೆ ಸರಿಸಮ ಯಾರೂ ಇಲ್ಲ ಎಂದು ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ಮತ್ತೆ ಸಿದ್ದರಾಮಯ್ಯರ ಜಪ ಮಾಡುತ್ತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಪರ ಮತ್ತೆ ಬ್ಯಾಟಿಂಗ್ ಮಾಡಿದ್ದಾರೆ. ಸಿದ್ದರಾಮಯ್ಯಗೆ ಸಾಟಿ ಸಿದ್ದರಾಮಯ್ಯನೇ, ಅವರಿಗೆ ಸರಿಸಮ ಯಾರೂ ಇಲ್ಲ. ಇಂತಹ ಧೀಮಂತ ನಾಯಕ ರಾಜ್ಯಕ್ಕೆ ಸಿಕ್ಕಿದ್ದು ಹೆಮ್ಮೆಯ ವಿಷಯವಾಗಿದೆ. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂಬವರಲ್ಲಿ ನಾನು ಮೊದಲಿಗ. ಇದರಲ್ಲಿ ಎರಡನೇ ಮಾತೇ ಇಲ್ಲ. ಅನ್ನಭಾಗ್ಯ ಬೇರೆ ರಾಜ್ಯದ ಯಾವ ಸಿಎಂ ಕೊಟ್ಟಿದ್ದಾನೆ? ಆದರೆ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ಕೊಟ್ಟಿದ್ದಾರೆ. ಇಂದು ಬರಗಾಲ ಬಂದರೂ ಅನ್ನಭಾಗ್ಯ ಯೋಜನೆ ಇರುವ ಕಾರಣಕ್ಕೆ ಜನರು ಊರು ಬಿಟ್ಟು ಗೂಳೆ ಹೋಗುತ್ತಿಲ್ಲ ಎಂದು ಹಾಡಿ ಹೊಗಳಿದರು.
ಬಿಜೆಪಿ ಸರ್ಕಾರ ಇಡೀ ಕಲಬುರಗಿ ಭಾಗಕ್ಕೆ ಒಂದೇ ಒಂದು ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಕಲ್ಯಾಣ ರಾಜ್ಯ ಒಂದು ಕಡೆ ನಾಮಕರಣ ಮಾಡಿ, ಮಂತ್ರಿ ಪದವಿ ಒಂದೂ ಕೊಡೋದಿಲ್ಲ. ಕೊಟ್ಟರೂ ಪಶುಸಂಗೊಪನೆ ಎಂದು ಒಂದು ಖಾತೆ ಕೊಟ್ಟು ನಮಗೆ ಈ ರೀತಿ ವಂಚನೆ ಮಾಡೋದನ್ನ ನಾವು ಸಹಿಸಿಕೊಳ್ಳುವುದಿಲ್ಲ. ಕೇವಲ ಹೆಸರು ರಾಜ ಎಂದು ಇಟ್ಟು ಕೆಲಸ ಬೇರೆ ಅವರು ಮಾಡಿದರೆ ಒಪ್ಪಿಕೊಳ್ಳುವುದಿಲ್ಲ.
ಹಾಗೆಯೇ ಜಿಲ್ಲೆಯ ಒಳ್ಳೆಯ ಸಚಿವ ಸ್ಥಾನ ಕೊಡಬೇಕು, ಅಭಿವೃದ್ಧಿಗೆ ಒಳ್ಳೆಯ ಬಜೆಟ್ ನೀಡಬೇಕು ಹಾಗೂ ಕಲ್ಯಾಣ ರಾಜ್ಯವನ್ನಾಗಿ ಮಾಡಲು ಎಲ್ಲರಿಗೂ ಸಹಕಾರ ನೀಡಬೇಕು. ಆ ಮಾತ್ರ ಕರ್ನಾಟಕಕ್ಕೆ ಕಲ್ಯಾಣ ರಾಜ್ಯ ಎಂದು ನಾಮಕರಣ ಮಾಡಿದಕ್ಕೂ ಸಾರ್ಥಕವಾಗುತ್ತದೆ. ಈ ಬಗ್ಗೆ ಗಮನ ಕೊಡಿ ಎಂದು ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಹೇಳಿದರು.