ಯಾದಗಿರಿ: ಮಹಾರಾಷ್ಟ್ರದ ಪುಣೆಯಲ್ಲಿ ಗಣೇಶ ವಿಸರ್ಜನೆ ವೇಳೆ ಅವಘಡ ನಡೆದು ಇಬ್ಬರು ಯುವಕರು ಕೆರೆ ಪಾಲಾಗುತ್ತಿದ್ದರು, ಈ ವೇಳೆ ಪ್ರಾಣದ ಹಂಗು ತೊರೆದು ಯಾದಗಿರಿಯ ಯುವಕ ಇಬ್ಬರ ಜೀವ ಉಳಿಸಿದ್ದಾನೆ.
ಮೂಲತಃ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊನಹಳ್ಳಿಯ ನಿವಾಸಿಯಾಗಿರುವ ದೇವಪ್ಪ ಇಬ್ಬರ ಜೀವ ಉಳಿಸಿದ್ದಾನೆ. ಸದ್ಯ ಪುಣೆಯ ಖಾಸಗಿ ಕಂಪನಿಯೊಂದರಲ್ಲಿ ದೇವಪ್ಪ ಕೆಲಸ ಮಾಡುತ್ತಿದ್ದಾನೆ. ಶನಿವಾರ ಪುಣೆ ನಗರದಲ್ಲಿರುವ ಬ್ರಿಡ್ಜ್ ಕಮ್ ಬ್ಯಾರೇಜ್ನಲ್ಲಿ ಗಣೇಶ್ ವಿಸರ್ಜನೆಯನ್ನು ಮಾಡಲು ಸ್ಥಳೀಯರು ತೆರೆಳಿದ್ದರು. ಈ ವೇಳೆ ಕೆಲ ಯುವಕರು ಗಣೇಶ ಮೂರ್ತಿ ಹಿಡಿದ ಕೆರೆ ಆಳಕ್ಕೆ ಇಳಿದಿದ್ದರು. ಕೆರೆಗೆಳಿದ ಯುವಕರಲ್ಲಿ ಇಬ್ಬರಿಗೆ ಈಜುಬಾರದ ಹಿನ್ನೆಲೆ ನೀರಿನಲ್ಲಿ ಮುಳುಗುತ್ತಿದ್ದರು.
ಇದನ್ನು ಗಮನಿಸಿದ ದೇವಪ್ಪ ಕೆರೆಗೆ ಜಿಗಿದು ಯುವಕರ ಜೀವ ಉಳಿಸಿದ್ದಾನೆ. ದೇವಪ್ಪ ಯುವಕರನ್ನು ಕಾಪಾಡುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದು, ಈ ದೃಶ್ಯಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ. ನೆರೆಯ ರಾಜ್ಯದಲ್ಲಿ ಇಬ್ಬರ ಜೀವ ಉಳಿಸಿದ ಕನ್ನಡಿಗನ ಸಾಹಸ ನಿಜಕ್ಕೂ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.