ಗದಗ: ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಮಳೆಯಾಗಿದ್ದು, ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಬೈಕ್ ಸಮೇತ ಓರ್ವ ವ್ಯಕ್ತಿ ಕೊಚ್ಚಿ ಹೋಗಿರುವ ಘಟನೆ ನರಗುಂದ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.
ನವಿಲುತೀರ್ಥ ಡ್ಯಾಂ ನಿಂದ ಅಪಾರ ಪ್ರಮಾಣ ನೀರು ಬಿಡುಗಡೆಯಾದ ಹಿನ್ನೆಲೆ ಮಲಪ್ರಭಾ ನದಿಯೂ ಉಕ್ಕಿ ಹರಿಯುತ್ತಿದೆ. ಈ ಪ್ರವಾಹದಲ್ಲಿ ಬೈಕ್ ಸವಾರನೊಬ್ಬ ಕೊಚ್ಚಿ ಹೋಗಿದ್ದು, ಇನ್ನೊಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಡ್ಯಾಂ ನಿಂದ ನೀರು ಬಿಟ್ಟ ಪರಿಣಾಮ ಅಪಾರ ಪ್ರಮಾಣದ ನೀರು ಹರಿದು ಹೋಗುತ್ತಿತ್ತು. ಈ ವೇಳೆ ಬೈಕ್ ದೂಡಿಕೊಂಡು ರಸ್ತೆ ದಾಟುತ್ತಿದ್ದ ಇಬ್ಬರು ರಸ್ತೆ ಕಾಣದೇ ಅಲ್ಲೇ ನಿಂತಿದ್ದಾರೆ. ಈ ವೇಳೆ ನೀರಿನ ರಭಸಕ್ಕೆ ಬೈಕ್ ಕೊಚ್ಚಿಕೊಂಡು ಹೋಗಿದೆ. ಬೈಕ್ ಹಿಡಿದುಕೊಳ್ಳಲು ಹೋದ ವ್ಯಕ್ತಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ಇದನ್ನು ನೋಡಿ ಎಚ್ಚೆತ್ತುಕೊಂಡ ಇನ್ನೊಬ್ಬ ವ್ಯಕ್ತಿ ನಿಧಾನವಾಗಿ ಮೇಲೆ ಹೋಗಿದ್ದಾನೆ. ಈಗ ಸ್ಥಳಕ್ಕೆ ರಕ್ಷಣ ಸಿಬ್ಬಂದಿ ಬಂದಿದ್ದು ಕೊಚ್ಚಿ ಹೋದ ವ್ಯಕ್ತಿಯನ್ನು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಕೊಚ್ಚಿಹೋದ ಸ್ಥಳದಲ್ಲಿ ರೈಲ್ವೆ ಬ್ರಿಡ್ಜ್ ಇದ್ದು, ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.