ಹಾಸನ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕಲೇಶಪುರದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುಡ್ಡ ಕುಸಿತವಾಗಿದ್ದು ಸಂಚಾರ ಬಂದ್ ಆಗಿದೆ. ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದು, ಸವಾರರು ಪರದಾಡುತ್ತಿದ್ದಾರೆ.
ಕಳೆದ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಕಲೇಶಪುರ ತಾಲೂಕಿನ ಎತ್ತಿನಹಳ್ಳದಲ್ಲಿ ರಸ್ತೆಮೇಲೆ ಮಣ್ಣಿನ ರಾಶಿ ಬಿದ್ದಿದೆ. ಹೀಗಾಗಿ ಮಡಿಕೇರಿ ಮಾರ್ಗದ ಮೂಲಕ ಮಂಗಳೂರಿಗೆ ತೆರಳುವಂತೆ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
ಮಂಗಳೂರಿಗೆ ತೆರಳೋ ವಾಹನ ಮಾಲೀಕರು ಮಡಿಕೇರಿ ಮಾರ್ಗದ ಮೂಲಕ ತೆರಳಲು ಸೂಚನೆ ನೀಡಲಾಗಿದೆ. ಯಾಕೆಂದರೆ ರಸ್ತೆ ಮೇಲೆ ಬಿದ್ದಿರುವ ಮಣ್ಣು ತೆರವು ಮಾಡಲು ಸಾಕಷ್ಟು ಸಮಯ ಬೇಕು. ಈ ಹಿನ್ನೆಲೆಯಲ್ಲಿ ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸ್ ಇಲಾಖೆ ಮನವಿ ಮಾಡಿಕೊಂಡಿದೆ.
ಇತ್ತ ಚಾರ್ಮಾಡಿ ಘಾಟಿಯಲ್ಲೂ ಗುಡ್ಡ ಕುಸಿತವಾಗಿದ್ದು ಇಲ್ಲೂ ಸಂಚಾರವನ್ನು ಬಂದ್ ಮಾಡಲಾಗಿದೆ. ಕಳೆದ ವರ್ಷ ಬಿದ್ದ ಭಾರೀ ಮಳೆಗೆ ಮಡಿಕೇರಿ ಸುಳ್ಯ ಮಧ್ಯೆ ಇರುವ ಸಂಪಾಜೆ ಘಾಟಿಯ ರಸ್ತೆ ಕೊಚ್ಚಿಕೊಂಡು ಹೋಗಿತ್ತು. ಹೀಗಾಗಿ ಹಲವು ತಿಂಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಈ ಬಾರಿಯ ಮಳೆಗೆ ರಸ್ತೆ ಬದಿಯಲ್ಲಿ ಹಾಕಲಾಗಿದ್ದ ಮರಳಿನ ದಿಬ್ಬಗಳು ಕೊಚ್ಚಿಕೊಂಡು ಹೋಗಿವೆ.