ಚಿಕ್ಕಬಳ್ಳಾಪುರ: ಭಾನುವಾರ ರಾತ್ರಿ ಸುರಿದ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಗೆ ರೈತರ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ದ್ರಾಕ್ಷಿ ಬೆಳೆ ಮಣ್ಣು ಪಾಲಾಗಿದೆ.
ಚಿಕ್ಕಬಳ್ಳಾಪುರದ ಪ್ರಮುಖ ತೋಟಗಾರಿಕಾ ಬೆಳೆಯಾಗಿರುವ ದ್ರಾಕ್ಷಿಯನ್ನು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಆದರೆ ತಡರಾತ್ರಿ ಸುರಿದ ಮಳೆರಾಯನ ಅಬ್ಬರಕ್ಕೆ ಕಟಾವಿಗೆ ಬಂದಿದ್ದ ಬೆಳೆ ಎಲ್ಲಾ ಮಣ್ಣುಪಾಲಾಗಿದೆ.
ಬರಗಾಲದಲ್ಲೂ ಸಾವಿರ ಎರಡು ಸಾವಿರ ಆಳದಿಂದ ನೀರು ತೆಗೆದು, ಟ್ಯಾಂಕರ್ಗಳಿಂದ ನೀರು ಹಾರಿಸಿ ಬಹಳ ಕಷ್ಟ ಪಟ್ಟು ಇಳುವರಿ ಪಡೆಯಲಾಗಿತ್ತು. ಆದರೆ ಭಾನುವಾರ ರಾತ್ರಿ ಬಂದ ಮಳೆ ಕೈಗೆ ಬಂದ ತುತ್ತನ್ನು ಬಾಯಿಗೆ ಬಾರದ ರೀತಿ ಮಾಡಿದೆ.
ಬಿರುಗಾಳಿ ಸಮೇತ ಮಳೆ ಬಂದ ಕಾರಣ ಕಟಾವಿಗೆ ಬಂದಿದ್ದ ದ್ರಾಕ್ಷಿ ಗೊನೆಗಳೆಲ್ಲಾ ಮುರಿದು ಹೋಗಿ ಮಾರಾಟ ಮಾಡಲು ಆಗದಂತೆ ಆಗಿದೆ. ಇದರ ಜೊತೆ ಆಲಿಕಲ್ಲು ಬಿದ್ದ ಪರಿಣಾಮ ದ್ರಾಕ್ಷಿ ಗೊಂಚಲುಗಳಿಗೆ ಪೆಟ್ಟು ಬಿದ್ದಿದೆ.
ದ್ರಾಕ್ಷಿ ಬೆಳೆಯನ್ನೇ ನಂಬಿಕೊಂಡು ಔಷಧಿ ಆಗಂಡಿಗಳಲ್ಲಿ, ಗೊಬ್ಬರ ಅಂಗಂಡಿಯಲ್ಲಿ ಮತ್ತು ಬ್ಯಾಂಕಿನಲ್ಲಿ ಸಾಲ ಮಾಡಿಕೊಂಡಿದ್ದ ರೈತನಿಗೆ ಬೆಳೆ ನಾಶ ಆಗಿರುವುದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಉಳಿದ ದ್ರಾಕ್ಷಿಯನ್ನು ಮಾರಿ ಜೀವನ ಸಾಗಿಸೋಣ ಎಂದರೆ ಮಧ್ಯವರ್ತಿಗಳು ಕೊಂಡುಕೊಳ್ಳಲು ಮುಂದೆ ಬರುತ್ತಿಲ್ಲ. ಅದ್ದರಿಂದ ಈ ಭಾಗದ ರೈತರು ಬಹಳ ಸಂಕಷ್ಟಕ್ಕೆ ಸಿಲುಕಿದ್ದಾರೆ.