ಬಳ್ಳಾರಿ: ಹಾವಿನ ಜೊತೆ ಆಟವಾಡಲು ಹೋಗಿ ವ್ಯಕ್ತಿಯೊಬ್ಬ ಪ್ರಾಣ ಕಳೆದುಕೊಂಡ ಘಟನೆ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಬಸರಕೋಡು ಗ್ರಾಮದಲ್ಲಿ ನಡೆದಿದೆ.
ಬಸರಕೋಡು ಗ್ರಾಮದ ಕೆಂಚಪ್ಪ ಹರಿಜನ (40) ಮೃತಪಟ್ಟ ವ್ಯಕ್ತಿ. ಹಾವು ಕಚ್ಚಿದ 2 ಗಂಟೆಯ ಬಳಿಕ ಕೆಂಚಪ್ಪ ಸಾವನ್ನಪ್ಪಿದ್ದಾನೆ. ಈ ದೃಶ್ಯವನ್ನು ಸ್ಥಳದಲ್ಲಿಯೇ ಇದ್ದ ಕೆಲವರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಆಗಿದ್ದೇನು?:
ಕೆಂಚಪ್ಪ ಹರಿಜನ ಕಳೆದ ಐದು ವರ್ಷಗಳಿಂದ ಗ್ರಾಮದಲ್ಲಿ ಹಾವು ಬಂದರೆ ಅದನ್ನು ಹಿಡಿದು, ಆಟ ಆಡಿಸುತ್ತಿದ್ದ. ಬಳಿಕ ಅದನ್ನು ಗ್ರಾಮದಿಂದ ದೂರದ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದ. ಗ್ರಾಮದಲ್ಲಿ ಬಂದಿದ್ದ ನಾಗರಹಾವನ್ನು ಹಿಡಿದು ಇಂದು ಆಟವಾಡಿಸುತ್ತಿದ್ದ. ಈ ವೇಳೆ ಹಾವು ಆತನ ಎಡಗೈಗೆ ಕಚ್ಚಿದೆ. ತಕ್ಷಣವೇ ಹಾವನ್ನು ಎಸೆದು ಸ್ವಲ್ಪ ಮುಂದೆ ಹೋಗಿದ್ದ. ಮರಳಿ ಹಾವಿನ ಬಳಿಗೆ ಬಂದು ಬಾಲ ಹಿಡಿದು ಗ್ರಾಮದಿಂದ ದೂರದ ಪ್ರದೇಶ ಒಯ್ದು ಬಿಟ್ಟಿದ್ದ.
ಹಾವು ಕಚ್ಚಿದೆ, ಚಿಕಿತ್ಸೆ ತಗೆದುಕೊಳ್ಳುವಂತೆ ಗ್ರಾಮಸ್ಥರು ಕೆಂಚಪ್ಪ ಹರಿಜನಗೆ ತಿಳಿಸಿದ್ದರು. ಆದರೆ ಇದಕ್ಕೆ ಒಪ್ಪದ ಅವನು, ನನಗೆ ಈ ಹಿಂದೆ ಅನೇಕ ಬಾರಿ ಹಾವು ಕಚ್ಚಿದ್ದರೂ ಚಿಕಿತ್ಸೆ ತೆಗೆದುಕೊಂಡಿಲ್ಲ. ನನಗೆನೂ ಆಗಿಲ್ಲ ಎಂದು ಹೇಳಿದ್ದ.
ಕೆಂಚಪ್ಪ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾಗ ಹಾವಿನ ವಿಷ ತೀವ್ರತೆ ಏರಿದೆ. ಇದರಿಂದಾಗಿ ಒದ್ದಾಡಿ, ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ.