ಬೆಳಗಾವಿ: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪರವಾಗಿ ಬೆಳಗಾವಿಯ ರೈತ ಮಹಿಳೆ ಜಯಶ್ರೀ ಹಾಗೂ ಹಲವು ಮಹಿಳಾ ಸಂಘಟನೆಯ ಮಹಿಳೆಯರು ಪ್ರಚಾರಕ್ಕೆ ಹೋಗುವುದಾಗಿ ನಿರ್ಧರಿಸಿದ್ದಾರೆ.
ಈಗಾಗಲೇ ಮಂಡ್ಯದ ಹಲವು ರೈತ ಸಂಘಟನೆ ಮುಖಂಡರು ಕೂಡ ಜಯಶ್ರೀ ಅವರನ್ನು ಸಂಪರ್ಕ ಮಾಡಿದ್ದು ಪ್ರಚಾರಕ್ಕೆ ಬರುವಂತೆ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯಶ್ರೀ, ಸುಮಲತಾ ಅವರನ್ನು ಗೆಲ್ಲಿಸುವುದು ಹಾಗೂ ನಿಖಿಲ್ ಕುಮಾರಸ್ವಾಮಿ ಸೋಲಿಸಿ ಕುಟುಂಬ ರಾಜಕಾರಣ ಒದ್ದು ಓಡಿಸಲು ನಾವು ಕೂಡ ಪ್ರಚಾರಕ್ಕೆ ಹೋಗುತ್ತಿದ್ದೇವೆ. ಬೆಳಗಾವಿಯಿಂದ ಸುಮಾರು ಇಪ್ಪತ್ತಕ್ಕೂ ಅಧಿಕ ಮಹಿಳೆಯರು ಚುನಾವಣೆ ಮುಗಿಯುವವರೆಗೂ ಅಲ್ಲಿ ಪ್ರಚಾರವನ್ನ ನಡೆಸುತ್ತೇವೆ ಎಂದು ನೇರವಾಗಿ ಸಿಎಂ ಅವರಿಗೆ ಟಾಂಗ್ ನೀಡಿದ್ದಾರೆ.
ಕಬ್ಬಿನ ಬಾಕಿ ಬಿಲ್ ಕೊಡಿ ಎಂದು ಬೆಳಗಾವಿಯಲ್ಲಿ ಹೋರಾಟ ನಡೆಸಿದ್ದ ರೈತ ಮಹಿಳೆಗೆ `ಎಲ್ಲಿ ಮಲಗಿದ್ದೀಯಮ್ಮಾ’ ಎಂದು ಕೇಳಿದ್ದ ಸಿಎಂ ಅವರ ವಿರುದ್ಧ ಈ ಮೂಲಕ ಸೇಡು ತೀರಿಸಿಕೊಳ್ಳಲು ರೈತ ಮಹಿಳೆ ಜಯಶ್ರೀ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.