ಗದಗ: 5 ತಿಂಗಳ ಕಂದಮ್ಮನನ್ನು ನೇಣಿಗೆ ಹಾಕಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ತಾಲೂಕಿನ ಶ್ಯಾಗೋಟಿ ಗ್ರಾಮದಲ್ಲಿ ನಡೆದಿದೆ.
ಶೃತಿ ಗೋವಿಂದಗೌಡ ಹಿರೇಗೌಡ್ರ ತನ್ನ ಐದು ತಿಂಗಳ ಗಂಡು ಮಗುವನ್ನು ಮೊದಲು ನೇಣು ಹಾಕಿ ನಂತರ ನೇಣಿಗೆ ಶರಣಾಗಿದ್ದಾರೆ. ಬುಧವಾರ ರಾತ್ರಿ ವೇಳೆ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಸವದತ್ತಿ ತಾಲೂಕಿನ ಉಗರಗೋಳ ನಿವಾಸಿ ಗೋವಿಂದಗೌಡ ಹಿರೇಗೌಡ್ರ ಮದುವೆಯಾಗಿದ್ದರು. ಆದರೆ ಪತಿ ಗೋವಿಂದಗೌಡ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಪತಿಯ ಅನೈತಿಕ ಸಂಬಂಧ ಬಗ್ಗೆ ಇಬ್ಬರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಇದರಿಂದ ಮನನೊಂದು ಶೃತಿ ತವರು ಮನೆ ಶ್ಯಾಗೋಟಿ ಗ್ರಾಮಕ್ಕೆ ಹೋಗಿದ್ದರು. ಆದರೆ ಬುಧವಾರ ಶೃತಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮೊದಲು ಮಗುವಿಗೆ ನೇಣು ಬಿಗಿದು ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡನ ಕಿರುಕುಳ ಹಾಗೂ ಆತನ ಅನೈತಿಕ ಸಂಬಂಧದಿಂದ ಬೇಸತ್ತು ಇಂತಹದೊಂದು ಕೃತ್ಯಕ್ಕೆ ಮುಂದಾಗಿದ್ದಾಳೆ ಎಂದು ಶೃತಿ ಪೋಷಕರು ಆರೋಪಿಸುತ್ತಿದ್ದಾರೆ. ಶೃತಿ ಸಾಯುವ ಮುನ್ನ ಗಂಡನ ಕಿರುಕುಳ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಡೆದ ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.