ನವದೆಹಲಿ: ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯ ತಮಾಷೆಯಿಂದಾಗಿ 40 ವರ್ಷದ ವ್ಯಕ್ತಿಯೊಬ್ಬರು ತನ್ನ ಪ್ರಾಣವನ್ನೇ ಕಳೆದುಕೊಂಡ ಆಘಾತಕಾರಿ ಘಟನೆಯೊಂದು ದೆಹಲಿಯ ನಂಗೋಲಿ ಎಂಬಲ್ಲಿ ನಡೆದಿದೆ.
ಮೃತ ದುರ್ದೈವಿ ವ್ಯಕ್ತಿಯನ್ನು ರವೀಂದ್ರ ಎಂದು ಗುರುತಿಸಲಾಗಿದೆ. ಈ ಘಟನೆ ಬುಧವಾರ ಬೆಳಗ್ಗೆ ನಡೆದಿದೆ. ಪಂಡಿತ್ ಪ್ರಕರಣದ ಆರೋಪಿಯಾಗಿದ್ದು, ಸದ್ಯ ಈತನನ್ನು ನಂಗೋಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಏನಿದು ಘಟನೆ?: ನಂಗೋಲಿಯ ಸ್ವರ್ಣ್ ಪಾರ್ಕ್ ಪ್ರದೇಶದಲ್ಲಿ ತನ್ನ ಕುಟುಂಬದ ಜೊತೆ ವಾಸವಾಗಿರೋ ರವೀಂದ್ರ ಅವರು ಹತ್ತಿರದ ಪ್ಲೈವುಡ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಬೆಳಗ್ಗೆ ಕೆಲಸಕ್ಕೆಂದು ರವೀಂದ್ರ ಬಂದಿದ್ದರು. ಈ ವೇಳೆ ಅವರ ಹಿಂಬದಿಯಲ್ಲಿ ಪ್ಯಾಂಟ್ ಹರಿದಿರುವುದನ್ನು ಸಹೋದ್ಯೋಗಿ ಪಂಡಿತ್ ಗಮನಿಸಿದ್ದಾನೆ. ಅಲ್ಲದೇ ತಮಾಷೆಗೆಂದು ಪ್ಯಾಂಟ್ ತೂತಾಗಿರುವ ಗುದದ್ವಾರದ ಜಾಗದಲ್ಲಿ ಏರ್ ಜೆಟ್ ಪೈಪ್ ಇಟ್ಟು ಬಲವಾಗಿ ಗಾಳಿ ನಿರ್ದೇಶಿಸಿದ್ದಾನೆ. ಪರಿಣಾಮ ಬಲವಾದ ಗಾಳಿಯು ರವೀಂದ್ರ ಅವರ ದೇಹಕ್ಕೆ ಹೊಕ್ಕಿ ಕರುಳಿಗೆ ಗಂಭೀರ ಸ್ವರೂಪದ ಘಾಸಿಯಾಗಿದೆ. ಇದರಿಂದ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ, ಕರುಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಅಂತ ಅಲ್ಲಿನ ಡಿಸಿಪಿ ಘಟನೆಯ ಬಗ್ಗೆ ಮಾಧ್ಯಮಕ್ಕೆ ವಿವರಿಸಿದ್ದಾರೆ.
ರವೀಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ವೈದ್ಯರು ಚಿಕಿತ್ಸೆ ನೀಡಲಿಲ್ಲ. ಅಲ್ಲದೇ ಈ ಘಟನೆ ತುಂಬಾನೇ ಸೂಕ್ಷ್ಮವಾಗಿದ್ದು, ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸದಿರುವುದರಿಂದ ಅವರು ಸಾವನ್ನಪ್ಪಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಪಂಡಿತ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಮಾಷೆ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ ಅಂತ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಈ ಸಂಬಂಧ ಫ್ಯಾಕ್ಡರಿಯಲ್ಲಿ ಕೆಲಸ ಮಾಡುತ್ತಿರುವ ಇತರರನ್ನು ಕೂಡ ವಿಚಾರಣೆ ನಡೆಸಿದ್ದಾರೆ.