ತುಮಕೂರು: ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಶವ ಸಾಗಾಟ ಮಾಡಲು ವಾಹನ ಇಲ್ಲದ ಪರಿಣಾಮ ಆಟೋ ಚಾಲಕನ ಮೃತ ದೇಹವನ್ನು ಆಟೋದಲ್ಲೇ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಶಿವಕುಮಾರ್ ಎಂಬವರು ಹೃದಯಾಘಾತದಿಂದ ತನ್ನ ಆಟೋದಲ್ಲೇ ಮೃತಪಟ್ಟಿದ್ದಾರೆ. ಶಿವಕುಮಾರ ಮೃತಪಟ್ಟಿದ್ದನ್ನು ಖಾತ್ರಿ ಪಡಿಸಿಕೊಂಡ ಇತರ ಆಟೋ ಚಾಲಕರು ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ವಾಹನ ಹಳುಹಿಸುವಂತೆ 108 ವಾಹನಕ್ಕೆ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ತಿಳಿಸಿದ್ದಾರೆ.
ಸುಮಾರು 3 ಗಂಟೆ ಕಾದರೂ ಕೂಡಾ ಯಾವುದೇ ವಾಹನ ಬಂದಿಲ್ಲ. ಪರಿಣಾಮ ವಿಧಿಯಿಲ್ಲದೆ ಕುಳಿತ ಸ್ಥಿತಿಯಲ್ಲೆ ಆಟೋದಲ್ಲಿ ಮೃತ ದೇಹವನ್ನು ಇರಿಸಿಕೊಂಡು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಆದ್ರೆ ಈ ಆರೋಪವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ತಳ್ಳಿ ಹಾಕಿದ್ದಾರೆ. ಶವ ಸಾಗಿಸಲು ವಾಹನ ಕಳುಹಿಸಲಾಗಿತ್ತು. ಆದರೆ ಮೃತರ ಸಂಬಂಧಿಗಳು ಆತುರದಿಂದ ಆಟೋದಲ್ಲೆ ಶವ ಸಾಗಿಸಿದ್ದಾರೆ ಎಂದು ಹೇಳಿದ್ದಾರೆ.