ಕಲಬುರಗಿ: ಪೇದೆಯೋರ್ವ ಮಹಿಳೆಯ ಮೇಲೆ ಹಲ್ಲೆ ನಡೆಸಿ ಆಕೆಯ ಮನೆ ಜಖಂಗೊಳಿಸಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಪಿಎಸ್ಐ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ್ ತಾಲೂಕಿನ ಮಹಾಗಾಂವ ಗ್ರಾಮದಲ್ಲಿ ನಡೆದಿದೆ.
ಚಿಂಚೋಳಿ ಠಾಣೆಯ ಪೇದೆ ರಾಜಶೇಖರ್ಗೆ ಪರಿಚಯವಿರುವ ಮಹಿಳೆ ಹಾಗೂ ಪೇದೆ ನಡುವೆ ಜಗಳ ನಡೆದಿದ್ದು, ಈ ವೇಳೆ ಆಕೆಯ ಮೇಲೆ ಹಲ್ಲೆ ನಡೆಸಿ ಮನೆಗೆ ನುಗ್ಗಿ ಪೇದೆ ದಾಂಧಲೆ ನಡೆಸಿದ್ದಾರೆ. ಈ ಕುರಿತು ಮಹಾಗಾಂವ ಠಾಣೆಗೆ ಮಹಿಳೆ ಪೇದೆ ರಾಜಶೇಖರ್ ವಿರುದ್ಧ ದೂರು ನೀಡಿದ ಹಿನ್ನೆಲೆ ಮಹಾಗಾಂವ ಪಿಎಸ್ಐ ಬಸವರಾಜ್ ಚಿತ್ತಕೋಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನನ್ನ ವಿರುದ್ಧ ಪ್ರಕರಣ ಹೇಗೆ ದಾಖಲು ಮಾಡಿದ್ರಿ ಅಂತಾ ಮನೆ ಮುಂಭಾಗದಲ್ಲಿ ನಿಲ್ಲಿಸಿದ ಪಿಎಸ್ಐ ಅವರ ಸ್ವಂತ ಕಾರಿಗೆ ಪೇದೆ ರಾಜಶೇಖರ್ ಬೆಂಕಿ ಹಚ್ಚಿದ್ದಾರೆ. ಇದೀಗ ಕಾನ್ಸ್ಟೇಬಲ್ ರಾಜಶೇಖರ್ ವರನಾಳ್ ಮಹಿಳೆಗೆ ಹಲ್ಲೆ ಮಾಡಿದ ಪ್ರಕರಣದ ಜೊತೆ ಪಿಎಸ್ಐ ಕಾರಿಗೆ ಬೆಂಕಿ ಹಚ್ಚಿದ್ದರಿಂದ ಮಹಾಗಾಂವ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.

