ಮಂಡ್ಯ: ಕೆಆರ್ಎಸ್ ಜಲಾಶಯದಿಂದ(KRS Dam) ತಮಿಳುನಾಡಿಗೆ(Tamil Nadu) ಕಾವೇರಿ ನೀರು ಹರಿಸುತ್ತಿರುವುದು ಇದೀಗ ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮದ(Ranganathittu Bird Sanctuary) ಮೇಲೂ ತೀವ್ರ ಪರಿಣಾಮ ಬೀರಿದೆ. ಸುರಕ್ಷತಾ ದೃಷ್ಟಿಯಿಂದ ಪಕ್ಷಿಧಾಮದಲ್ಲಿ ಕಳೆದ 10 ದಿನಗಳಿಂದ ದೋಣಿ ವಿಹಾರ(Boating) ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.
ಸಾಮಾನ್ಯವಾಗಿ ಮುಂಗಾರು ಹಂಗಾಮಿನಲ್ಲಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಾಗ ಮಾತ್ರ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿ ಬೋಟಿಂಗ್ ಬಂದ್ ಮಾಡಲಾಗುತ್ತಿತ್ತು. ಆದರೆ ಪ್ರಸ್ತುತ ಬರಗಾಲದ ನಡುವೆಯೂ ತಮಿಳುನಾಡಿಗೆ ಕೆಆರ್ಎಸ್ನಿಂದ ನಿತ್ಯ ಸುಮಾರು 9,000 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವಿನ ವೇಗ ಹಾಗೂ ಮಟ್ಟದಲ್ಲಿ ದಿಢೀರ್ ಏರುಪೇರಾಗುತ್ತಿರುವುದರಿಂದ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಅರಣ್ಯ ಇಲಾಖೆ(Forest Department) ದೋಣಿ ವಿಹಾರವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತಷ್ಟು ತಗ್ಗಲಿದೆ ಮಳೆ – ಸೆಪ್ಟೆಂಬರ್ನಲ್ಲಿ ವಾಡಿಕೆಗಿಂತ ಕಡಿಮೆ ವರ್ಷಧಾರೆ
ಬೋಟಿಂಗ್ ಸ್ಥಗಿತಗೊಂಡ ಪರಿಣಾಮ ಪಕ್ಷಿಧಾಮಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, ಸದಾ ಗಿಜಿಗುಡುತ್ತಿದ್ದ ಪ್ರವಾಸಿ ತಾಣ ಇದೀಗ ಜನರಿಲ್ಲದೆ ಬಿಕೋ ಎನ್ನುತ್ತಿದೆ. ಒಂದೆಡೆ ತೀವ್ರ ಬರಗಾಲದ ನಡುವೆಯೂ ನೆರೆ ರಾಜ್ಯಕ್ಕೆ ನೀರು ಹರಿಸುತ್ತಿರುವುದಕ್ಕೆ ಕಾವೇರಿ ಕಣಿವೆಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದೆಡೆ ದೋಣಿ ವಿಹಾರದ ಆಸೆಯಿಂದ ದೂರದ ಊರುಗಳಿಂದ ಆಗಮಿಸಿದ ಪಕ್ಷಿಪ್ರೇಮಿಗಳು ತೀವ್ರ ನಿರಾಸೆಯಿಂದ ಹಿಂತಿರುಗುತ್ತಿದ್ದಾರೆ.
