ಮುಂಬೈ: ನಮ್ಮ ಕುಟುಂಬ ಇ20 (E20) ಎಥೆನಾಲ್ ಮಿಶ್ರಣ ಕಾರ್ಯಕ್ರಮದಿಂದ ಅಕ್ರಮ ಲಾಭ ಗಳಿಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡುತ್ತಿರುವ ಡೀಪ್ಫೇಕ್ ವೀಡಿಯೋಗಳು ಹಾಗೂ ನಿಂದನೀಯ ಪೋಸ್ಟ್ಗಳ ವಿರುದ್ಧ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ(Nitin Gadkari) ಮುಂಬೈ ಹೈಕೋರ್ಟ್ನಲ್ಲಿ ಕಾನೂನು ಸಮರ ಆರಂಭಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಮೆಟಾ (Meta), ಇತರ ಸೋಶಿಯಲ್ ಮೀಡಿಯಾ ವೇದಿಕೆಗಳು ಹಾಗೂ ಸುಳ್ಳು ಮಾಹಿತಿ ಹರಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕೇಸ್ (Civil Suit) ಹೂಡಲು ಅನುಮತಿ ನೀಡಿದೆ.
ಎಥೆನಾಲ್ (Ethanol) ಮಿಶ್ರಣ ನೀತಿಯನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ನಿರ್ವಹಿಸುತ್ತಿದ್ದರೂ, ಗಡ್ಕರಿ ಮತ್ತು ಅವರ ಕುಟುಂಬದ ಹೆಸರನ್ನು ಇದಕ್ಕೆ ಅನಗತ್ಯವಾಗಿ ಎಳೆದು ತಂದು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಚಿವರ ಪರ ವಕೀಲರು ವಾದಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಭಯ್ ಅಹುಜಾ ಅವರಿದ್ದ ಪೀಠವು ಕೇಸ್ ದಾಖಲಿಸಲು ಅನುಮತಿ ನೀಡಿದೆ. ಇದನ್ನೂ ಓದಿ: ಪೆಟ್ರೋಲ್ ಟ್ಯಾಂಕ್ಗೆ ನೀರು ಹಾಕಿ ಎಥೆನಾಲ್ ವಿರುದ್ಧ ಅಪಪ್ರಚಾರ – ಯೂಟ್ಯೂಬರ್ ವಿರುದ್ಧ ಟೊಯೋಟಾ ಎಫ್ಐಆರ್
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಾಗ್ಪುರದಲ್ಲಿ ಖ್ಯಾತ ಯೂಟ್ಯೂಬರ್ ಮನೀಶ್ ಕಶ್ಯಪ್, ದೇಸಿ ಬಾಯ್ಸ್ (desi_boysncr) ಇನ್ಸ್ಟಾಗ್ರಾಮ್ ಖಾತೆ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಗಳಾದ ಹರ್ಷಿತ್ ರಾಠಿ ಮತ್ತು ಅಂಕಲೇಶ್ ಇನ್ವಾಟಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಕಸದಿಂದ ತಯಾರಿಸಿದ ಹೈಡ್ರೋಜನ್ ಇಂಧನ ಬಳಸಿ ಓಡಲಿವೆ ದೆಹಲಿ ಬಸ್ಗಳು: ಗಡ್ಕರಿ ಘೋಷಣೆ
ಏನಿದು ಈ20 ಎಥೆನಾಲ್ ವಿವಾದ?
ಕೇಂದ್ರ ಸರ್ಕಾರವು ಪೆಟ್ರೋಲ್ನಲ್ಲಿ 20% ರಷ್ಟು ಎಥನಾಲ್ ಮಿಶ್ರಣ ಮಾಡುವ ಇ20 ನೀತಿಯನ್ನು ಜಾರಿಗೆ ತಂದಿದ್ದು, ಇದು ದೇಶದ ಇಂಧನ ಭದ್ರತೆ ಮತ್ತು ಪರಿಸರ ರಕ್ಷಣೆಗೆ ಪೂರಕವಾಗಿದೆ ಎಂದು ಹೇಳಿದೆ. ವಾಹನ ಮೈಲೇಜ್ 5% ಕಡಿಮೆಯಾದರೂ ಎಂಜಿನ್ಗೆ ಯಾವುದೇ ಸಮಸ್ಯೆ ಇಲ್ಲ ಎಂದು ಕೇಂದ್ರ ಸರ್ಕಾರ ಮತ್ತು ಅಟೋಮೊಬೈಲ್ ಕಂಪನಿಗಳು ಸ್ಪಷ್ಟಪಡಿಸಿವೆ.
ಹೀಗಿದ್ದರೂ ಕೆಲವು ವಾಹನ ಸವಾರರು ಹಾಗೂ ಆಟೋಮೊಬೈಲ್ ಪ್ರಿಯರು ಈ ನೀತಿಯಿಂದ ಹಳೆಯ ವಾಹನಗಳ ಎಂಜಿನ್ಗೆ ಹಾನಿಯಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ಕುಟಂಬಕ್ಕೆ ಲಾಭ ಮಾಡಿಕೊಡಲು ಗಡ್ಕರಿ ಎಥೆನಾಲ್ ಪ್ರಚಾರ ಮಾಡುತ್ತಿದ್ದಾರೆ ಎಂದು ದೂರುತ್ತಿದ್ದಾರೆ. ತನ್ನ ವಿರುದ್ಧ ಅಪಪ್ರಚಾರವೂ ತೀವ್ರಗೊಂಡ ಹಿನ್ನೆಲೆಯಲ್ಲಿ ಈಗ ಗಡ್ಕರಿ ಕಾನೂನು ಸಮರ ಆರಂಭಿಸಿದ್ದಾರೆ.

