ಬೆಂಗಳೂರು: 5,000 ರೂ. ಲಂಚ ಪಡೆದ ಆರೋಪದ ಮೇಲೆ ಪುಲಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ (Traffic Head Constable) ಒಬ್ಬರನ್ನ ಅಮಾನತು ಮಾಡಿರುವ ಘಟನೆ ನಡೆದಿದೆ.
ಬೆಂಗಳೂರು (Bengaluru) ಪೂರ್ವ ವಿಭಾಗ ಟ್ರಾಫಿಕ್ ಡಿಸಿಪಿ ಸಾಹಿಲ್ ಬಾಗ್ಲಾ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸೋಮಶೇಖರ್ ಅಮಾನತುಗೊಂಡ ಹೆಡ್ ಕಾನ್ಸ್ಟೇಬಲ್.

ಕಾರಣ ಏನು?
ಸೋಮಶೇಖರ್ ಅವರು ವಾಹನ ತಪಾಸಣೆ ಕರ್ತವ್ಯದಲ್ಲಿದ್ದಾಗ, ಕಬ್ಬಿಣ ತುಂಬಿದ ಲಾರಿ ಚಾಲಕ ಸಯ್ಯದ್ ಅಪ್ರೋಜ್ ಎಂಬಾತನಿಂದ 5,000 ರೂ. ಲಂಚ (Bribe) ಪಡೆದಿದ್ದರು. ಲಂಚ ಪಡೆದು ವಾಹನ ಬಿಟ್ಟುಕಳಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಕೇಸ್ದ ದಾಖಲಿಸಿದ್ರೆ ಕೋರ್ಟ್ನಲ್ಲಿ ಫೈನ್ ಕಟ್ಟಬೇಕು ಅಂತ ಬೆದರಿಸಿ ಹಣ ಪಡೆದುಕೊಂಡಿದ್ದಾರೆ ಹೆಡ್ ಕಾನ್ಸ್ಟೇಬಲ್ ಸೋಮಶೇಖರ್. ಹಣ ನೀಡುವ ವೇಳೆ ಲಾರಿ ಚಾಲಕ ಅಪ್ರೋಜ್ ಮೊಬೈಲ್ನಲ್ಲಿ ವಿಡಿಯೋ ರೆಕಾರ್ಡ್ ಮಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಕರ್ತವ್ಯ ಲೋಪ ಎಸಗಿ ಹಣ ಪಡೆದ ಆರೋಪ ಅಡಿಯಲ್ಲಿ ಸೋಮಶೇಖರ್ನನ್ನ ಅಮಾನತು ಮಾಡಲಾಗಿದೆ.
